ದೇಶ

ಗೋರಖ್ ಪುರ್ ದುರಂತ: ದುಃಖತಪ್ತ ತಂದೆಯಿಂದ ಆರೋಗ್ಯ ಸಚಿವರ ವಿರುದ್ಧ ದೂರು ದಾಖಲು

Sumana Upadhyaya
ಗೋರಖ್ ಪುರ(ಉ.ಪ್ರ): ಗೋರಖ್ ಪುರದ ಬಿಆರ್ ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಮಗುವಿನ ತಂದೆ ರಾಜ್ಯದ ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಗೋರಖ್ ಪುರದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 
ಬಿಹಾರದ ಗೋಪಾಲ್ ಗಂಜ್ ನ ರಾಜ್ ಬ್ಹರ್ ಎಂಬುವವರು ಕಳೆದ 10ರಂದು ತಮ್ಮ ಮಗುವನ್ನು ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.  ತಮ್ಮ ಮಗು ಆಮ್ಲಜನಕ ಪೂರೈಕೆಯ ಕೊರತೆಯಿಂದ ಮೃತಪಟ್ಟಿದ್ದು ಇದಕ್ಕೆ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ಆಶುತೋಷ್ ಟಂಡನ್ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತ್ರಿವೇದಿ ಕಾರಣ ಎಂದು ಪೊಲೀಸರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಮಗುವಿನ ಸಾವಿನ ನಂತರ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಕೂಡ ಅವರು ಆಪಾದಿಸಿದ್ದಾರೆ.
ನಿನ್ನೆ ರಾಜ್ ಬ್ಹರ್ ದೂರು ನೀಡಿದ್ದರೂ ಇದುವರೆಗೆ ಎಫ್ ಐಆರ್ ದಾಖಲಾಗಿಲ್ಲ. 
ಈ ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ರಾಜೀವ್ ಮಿಶ್ರಾ ಅವರನ್ನು ಆರೋಪಿಸಿದ್ದಾರೆ. ಮಕ್ಕಳು ಆಮ್ಲಜನಕ ಪೂರೈಕೆ ಕೊರತೆಯಿಂದ ಮೃತಪಟ್ಟರೇ ಎಂದು ನಿಖರವಾಗಿ ತನಿಖೆ ನಡೆಸಲು ಸಚಿವರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಪ್ರಕರಣ ಸಂಬಂಧ ಯಾರೋ ತಪ್ಪಿತಸ್ಥರಾದರೂ ಕೂಡ ಶಿಕ್ಷಿಸದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
SCROLL FOR NEXT