ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್
ನವದೆಹಲಿ: ಸ್ವಾತಂತ್ರ್ಯೋ ದಿನದ ನಿಮಿತ್ತ ಎಡರಂಗ ಮುಖಂಡ ಹಾಗೂ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಭಾಷಣವನ್ನು ಪ್ರಸಾರ ಮಾಡಲು ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನ ಹಾಗೂ ಆಕಾಶವಾಣಿ ನಿರಾಕರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಹಾಗೂ ಸಿಪಿಎಂ ಆರೋಪ ಮಾಡಿದೆ.
ಆ.15ರಂದು ಪ್ರಸಾರ ಆಗಬೇಕಿದ್ದ ಭಾಷಣವನ್ನು 12ನೇ ತಾರೀಖಿಗೇ ಧ್ವನಿಮುದ್ರಿಸಲಾಗಿತ್ತು. ಆದರೆ, 14ರಂದು ಸಂಜೆ 7ಕ್ಕೆ ಈ ಭಾಷಣವನ್ನು ತಿದ್ದುಪಡಿ ಮಾಡಿ, ಇಲ್ಲದಿದ್ದರೆ ಪ್ರಸಾರ ಮಾಡಲಾಗದು' ಎಂಬ ಸಂದೇಶ ಬಂತೆಂದು ಸಿಪಿಎಂ ಆರೋಪಿಸಿದೆ.
ದೂರದರ್ಶನ ಹಾಗೂ ಎಐಆರ್ ನ ಈ ಪ್ರತಿಕ್ರಿಯೆಗೆ ಮುಖ್ಯಮಂತ್ರಿಗಳ ಕಚೇರಿ ತೀವ್ರವಾಗಿ ಕಿಡಿಕಾರಿದ್ದು ,ಭಾಷಣದ ಒಂದು ಪದವನ್ನೂ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದೆ.
ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿಯವರು, ದೂರದರ್ಶನ ಹಾಗೂ ಎಐಆರ್ ಏನು ಬಿಜೆಪಿ-ಆರ್'ಎಸ್ಎಸ್'ನವರ ಖಾಸಗಿ ಆಸ್ತಿಯಲ್ಲ. ವಿರೋಧಪಕ್ಷಗಳು ಹಾಗೂ ಆಯ್ಕೆಗೊಂಡ ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲರ ದನಿ ಹತ್ತಿಕ್ಕಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಆಪ್ತರಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಭಾಷಣ ಪ್ರಸಾರ ಮಾಡಲು ದೂರದರ್ಶನ ಹಾಗೂ ಎಐಆರ್ ನಿರಾಕರಿಸುವುದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ. ವಿವಾದ ಸಂಬಂಧ ದೂರದರ್ಶನವಾಗಲೀ ಅಥವಾ ಎಐಆರ್ ಆಗಲೀ ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ.