ನವದೆಹಲಿ: ಹಿಂದೂ ಭಯೋತ್ಪದಾನೆ ಅಥವಾ ಕೇಸರಿ ಭಯೋತ್ಪಾದನೆ ಎಂಬ ಪದಕ್ಕೆ ನನ್ನ ವಿರೋಧವಿದೆ ಎಂದಿರುವ ನಿರ್ಗಮಿತ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಅವರು, ಭಯೋತ್ಪಾದನೆಗೆ ಯಾವುದೇ ಬಣ್ಣ ಇಲ್ಲ ಎಂದು ಬುಧವಾರ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಕೇಸರಿ ಅಥವಾ ಇತರೆ ಯಾವುದೇ ಬಣ್ಣ ಮತ್ತು ಧರ್ಮಕ್ಕೆ ಹೋಲಿಕೆ ಮಾಡುವುದು ಸೂಕ್ತವಲ್ಲ ಎಂದು ರಾಜೀವ್ ಮೆಹ್ರಿಶಿ ಅವರು ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದಲ್ಲಿ ತೊಂದರೆ ಮಾಡುತ್ತಿದೆ. ಆದರೆ ಕಾಶ್ಮೀರಿಗಳು ಇದು ದೆಹಲಿ ಮಾಧ್ಯಮಗಳ ಪರಿಕಲ್ಪನೆ ಎಂದು ದೂರುವುದು ಸರಿಯಲ್ಲ ಎಂದಿದ್ದಾರೆ.
ರಾಜೀವ್ ಮೆಹ್ರಿಶಿ ಅವರು ನಾಳೆ ಸೇವೆಯಿಂದ ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ರಾಜೀವ್ ಗೌಬ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಇನ್ನು ನಿವೃತ್ತಿಯ ನಂತರ ರಾಜೀವ್ ಮೆಹ್ರಿಶಿ ಅವರನ್ನು ಕೇಂದ್ರ ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.