ಭಾರೀ ಮಳೆಯ ಪರಿಣಾಮ ಜಲಾವೃತಗೊಂದ ರಸ್ತೆಗಳಲ್ಲಿ ನಿಂತಿರುವ ವಾಹನಗಳು
ಮುಂಬೈ: 'ಮಹಾಮಳೆ'ಗೆ ಮುಂಬೈ ಮುಳುಗಿ ಹೋಗಿದ್ದು, ಸತತವಾಗಿ ಸುರಿದ ಧಾರಾಕಾರ ಮಳೆ ಮತ್ತು ಗಾಳಿಗೆ ನಗರ ಜೀವನ ಸಂಪೂರ್ಣ ಸ್ಥಬ್ಧಗೊಂಡಿದ್ದು ಇದೀಗ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಳೆಯ ಪರಿಣಾಮ ಸಂಭವಿಸಿದ ಅವಾಂತರಗಳಿಗೆ ಈವರೆಗೂ 10 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀಮಳೆಯಿಂದಾಗಿ ನಗರವೆಲ್ಲಾ ಸಂಪೂರ್ಣ ನೀರಿನಿಂದ ಆವೃತಗೊಂಡಿದ್ದು ಇಂದು ನೀರು ನಿಧಾನಗತಿಯಲ್ಲಿ ಇಳಿಮುಖವಾಗತೊಡಗಿದೆ.
ಮಳೆಯ ಪರಿಣಾಮ ಮರಗಳು ಧರೆಗುರುಳಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ, ಮಳೆರಾಯನ ನರ್ತನ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ಪಶ್ಚಿಮ ವಿಭಾಗಗಳ ರೈಲು ಸಂಚಾರ ಪುನರಾರಂಭಗೊಂಡಿದೆ. ಮಂಜು ಕವಿದ ವಾತಾವರಣ ಮುಂದುವರೆದಿರುವ ಹಿನ್ನಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯಗಳು ಮುಂದುವರೆದಿದೆ.
ನಿನ್ನೆ ಸುರಿದ ಮಹಾಳೆಯಿಂದಾಗಿ ವಾಣಿಜ್ಯ ನಗರಿಯ ಪ್ರಮುಖ ಸ್ಥಳಗಳಾದ ನವಿ ಮುಂಬೈ, ಬಾಂದ್ರಾ, ಅಂಧೇರಿ, ಎಲ್ಫಿನ್ ಸ್ಟೋನ್ ರಸ್ತೆ, ದಾದರ್ ಪ್ರದೇಶದ ರಸ್ತೆ, ಸಿಟಿ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರೆ ಸ್ಥಳಗಳು ಸಂಪೂರ್ಣ ಜಲಾವೃತಗೊಂಡಿತ್ತು. ಈ ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿತ್ತು. ಹೀಗಾಗಿ ಅಲ್ಲಿದೆ ಬಂದ ವಾಹನಗಳು ಹೆಚ್ಚಿನ ಸಮಯ ಮುಂದೂ ಹೋಗಲಾರದೆ ಹಿಂದಕ್ಕೂ ತೆರಳಾಗದೆ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದವು.
ಮಹಾಮಳೆಯ ಪರಿಣಾಮ ಅಂಗಡಿಗಳ ಬಾಗಿಲುಗಳನ್ನು ಮುಚ್ಚಿದ್ದ ಮಾಲೀಕರು ಮನೆಯತ್ತ ಹೆಜ್ಜೆ ಹಾಕಿದ್ದರು. ಅದೃಷ್ಟವಶಾತ್ ರಾತ್ರಿ 8 ಗಂಟೆ ಬಳಿಕ ಮಳೆಯ ಪ್ರಮಾಣ ನಿಧಾನಗತಿಯಲ್ಲಿ ಕಡಿಮೆಯಾಗಲು ಆರಂಭಿಸಿತ್ತು. ಗಾಳಿಯ ಪ್ರಮಾಣ ಕೂಡ ಸಂಪೂರ್ಣ ನಿಂತಿತ್ತು. ಬಳಿಕ ಉಸಿರುಬಿಟ್ಟ ಮುಂಬೈ ಜನತೆ ತಮ್ಮ ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ್ದ ನೀರನ್ನು ಹೊರಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ರಸ್ತೆಗಿಂತ ಕಳೆಭಾಗದಲ್ಲಿದ್ದ ಅಂಗಡಿಗಳಲ್ಲಿ ಪಂಪ್ ಸೆಟ್ ಮೂಲಕ ಜನರನ್ನು ನೀರನ್ನು ಹೊರಹಾಕುತ್ತಿದ್ದರು.
ಮಳೆಯಿಂದಾಗಿ ಸಂಭವಿಸಿದ ಅವಾಂತರಗಳಿಂದ ಈ ವರೆಗೂ ಸಾವನ್ನಪ್ಪಿದ್ದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮಳೆಯ ಪರಿಣಾಮ ರಸ್ತೆಗಳು ಸಂಪೂರ್ಣ ಜಲಾವೃತಗೊಂಡ ಪರಿಣಾಮ ದಾದರ್ ಮತ್ಕರ್ ರಸ್ತೆಯಲ್ಲಿದ್ದ ಒಳಚರಂಡಿಗೆ ಬಿದ್ದು ನಿನ್ನೆ ಕೂಡ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos