ದೇಶ

ವಾಯುಮಾಲಿನ್ಯ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ?: ದೆಹಲಿ ಸರ್ಕಾರಕ್ಕೆ ಎನ್ ಜಿಟಿ ತರಾಟೆ

Sumana Upadhyaya
ನವದೆಹಲಿ: ದೆಹಲಿ ನಗರದಲ್ಲಿನ ತೀವ್ರ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಸಲ್ಲಿಸದಿರುವ ದೆಹಲಿ ಸರ್ಕಾರಕ್ಕೆ ತೀವ್ರ ಛೀಮಾರಿ ಹಾಕಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ತೀವ್ರ ವಾಯುಮಾಲಿನ್ಯವಿದ್ದರೂ ಕೂಡ ಭಾರತ-ಶ್ರೀಲಂಕಾ ಕ್ರಿಕೆಟ್ ಪಂದ್ಯವನ್ನು ನಿಗದಿಪಡಿಸಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ಸ್ವತಂತರ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, ನಿರ್ದಿಷ್ಟ ಆದೇಶವಿದ್ದರೂ ಕೂಡ ಅದನ್ನು ಪಾಲಿಸದ ಆಪ್ ಸರ್ಕಾರ ವರದಿ ಸಲ್ಲಿಸದಿರುವುದಕ್ಕೆ ಆಕ್ಷೇಪವೆತ್ತಿದೆ.
ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ದೆಹಲಿ ಸರ್ಕಾರ, ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಮತ್ತು ಪರಿಸರ ಖಾತೆ ಕಾರ್ಯದರ್ಶಿಗಳು ಇತ್ತೀಚೆಗೆ ಬದಲಾಗಿರುವುದರಿಂದ ಕ್ರಿಯಾ ಯೋಜನೆ ಸಲ್ಲಿಸಲು ಹೆಚ್ಚಿನ ಸಮಯ ಬೇಕಾಗಿರಬಹುದು ಎಂದು ಹೇಳಿದೆ.
ಇದನ್ನು ಆಲಿಸಿದ ನ್ಯಾಯಾಧೀಕರಣ, ಮುಂದಿನ 48 ಗಂಟೆಗಳಲ್ಲಿ ಕ್ರಿಯಾ ಯೋಜನೆ ವರದಿ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ಆದೇಶ ನೀಡಿದೆ. 
ದೆಹಲಿ ಸುತ್ತಮುತ್ತ ಈಗಾಗಲೇ ವಾಯುಮಾಲಿನ್ಯ ಮಟ್ಟ ಅಪಾಯದ ಮಟ್ಟಕ್ಕೆ ತಲುಪಿದ್ದರೂ ಕೂಡ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ಉದಾಸೀನ ಭಾವ ತೋರುತ್ತಿದೆ. ಈ ವಾತಾವರಣದಲ್ಲಿ ಭಾರತ-ಶ್ರೀಲಂಕಾ ಕ್ರಿಕೆಟ್ ಪಂದ್ಯವನ್ನು ನಡೆಸುವುದು ಕೂಡ ಒಳ್ಳೆಯದಲ್ಲ ಎಂದು ನ್ಯಾಯಾಧೀಕರಣ ಹೇಳಿದೆ.
SCROLL FOR NEXT