ದೇಶ

ತನ್ನ ಪ್ರಾಣವನ್ನು ಲೆಕ್ಕಿಸದೇ 25 ಶಾಲಾ ಮಕ್ಕಳನ್ನು ರಕ್ಷಿಸಿದ ಚಾಲಕ

Vishwanath S
ರಾಯ್ಪುರ: ತನ್ನ ಪ್ರಾಣವನ್ನು ಲೆಕ್ಕಿಸದೇ ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದ ಶಾಲಾ ವಾಹನಕ್ಕೆ ಅಡ್ಡಲಾಗಿ ಮಲಗಿ ವಾಹನವನ್ನು ನಿಲ್ಲಿಸುವ ಮೂಲಕ 25 ಶಾಲಾ ಮಕ್ಕಳನ್ನು ರಕ್ಷಿಸುವಲ್ಲಿ ಚಾಲಕನೊಬ್ಬ ಯಶಸ್ವಿಯಾಗಿದ್ದಾನೆ. 
ಛತ್ತೀಸ್ ಗಢದ ರಾಯ್ಪರದ ಕುನ್ ಕುರಿ ಪ್ರಾಂತ್ಯದ ನಾರಾಯಣಪುರದಲ್ಲಿ ಆಂಗ್ಲ ಶಾಲೆಯ ವಾಹನವನ್ನು ಅದರ ಚಾಲಕ ತುಸು ಇಳಿಜಾರಿನ ಪ್ರದೇಶದಲ್ಲಿ ಮೊದಲ ಗೇರ್ ನಲ್ಲಿ ನಿಲ್ಲಿಸಿ ವಿರಾಮಕ್ಕಾಗಿ ಕೆಳಗೆ ಇಳಿದು ಹೋಗಿದ್ದ. ಈ ವೇಳೆ ವಾಹನದಲ್ಲಿದ್ದ ಮಗುವೊಂದು ಗೇರ್ ಅನ್ನು ಎಳೆದಿದ್ದು ಆಗ ಗೇರ್ ನ್ಯೂಟ್ರಲ್ ಗೆ ಬಿದ್ದಿದ್ದು ವಾಹನ ಹಿಂದಕ್ಕೆ ಚಲಿಸಲಾರಂಭಿಸಿದೆ. 
ಈ ಸಂದರ್ಭದಲ್ಲಿ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಮತ್ತೊಂದು ಶಾಲಾ ವಾಹನದ ಚಾಲಕ 30 ವರ್ಷದ ಶಿವ ಯಾದವ್ ಇದನ್ನು ಗಮನಿಸಿದ್ದು ಆತನಿಗೆ ತಕ್ಷಣಕ್ಕೆ ಏನು ಮಾಡಬೇಕು ಎಂದು ತೋಚಲಿಲ್ಲ. 
ವಾಹನವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಸುತ್ತಮುತ್ತ ದೊಡ್ಡ ಕಲ್ಲಿಗಾಗಿ ಹುಡುಕಾಡಿದ್ದಾನೆ. ಅಲ್ಲಿ ಕಲ್ಲು ಸಿಗದ ಕಾರಣ ತಾನೇ ವಾಹನದ ಚಕ್ರಕ್ಕೆ ಅಡ್ಡಲಾಗಿ ಮಲಗಿ ವಾಹನವನ್ನು ನಿಲ್ಲಿಸಿದ್ದಾನೆ. 
ಕೂಡಲೇ ಅಲ್ಲಿದ್ದವರು ಬಂದು ವಾಹನವನ್ನು ನಿಲ್ಲಿಸಿ ಶಿವ ಯಾದವ್ ನನ್ನು ಹೊರಗೆ ಎಳೆದಿದ್ದಾರೆ. ಈ ಘಟನೆಯಿಂದ ವಾಹನದಲ್ಲಿದ್ದ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ದೊಡ್ಡ ಪ್ರಮಾದವೇನು ನಡೆದಿಲ್ಲ. ಇನ್ನು ಶಿವ ಯಾದವ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 
SCROLL FOR NEXT