ಚುನಾವಣಾ ಪ್ರಚಾರದಲ್ಲಿ ದಿನಕರನ್
ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸ್ವಕ್ಷೇತ್ರ ಆರ್ ಕೆ ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಆಪ್ತ ಮತ್ತು ಸಂಬಂಧಿ ಟಿಟಿವಿ ದಿನಕರನ್ ಗೆ ಕೇಂದ್ರ ಚುನಾವಣಾ ಆಯೋಗ ಪ್ರೆಶರ್ ಕುಕ್ಕರ್ ಚಿನ್ಹೆಯನ್ನು ನೀಡಿದೆ.
ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆಗೊಂಡ ಬಳಿಕ ಆರ್ ಕೆ ನಗರ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದಿನಕರನ್ ಈ ಹಿಂದೆ ಟೋಪಿ ಗುರುತಿಗಾಗಿ ಆಯೋಗಕ್ಕೆ ಮನವಿ ಮಾಡಿದ್ದರು. ಆದರೆ ಆಯೋಗ ಟೋಪಿ ಚಿನ್ಹೆ ನೀಡಲು ನಿರಾಕರಿಸಿದ್ದರಿಂದ ದಿನಕರನ್ ಹೈಕೋರ್ಟ್ ಮೊರೆ ಹೋಗಿದ್ದರು. ದಿನಕರನ್ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಕೂಡ ದಿನಕರನ್ ಅರ್ಜಿಯನ್ನು ವಜಾಗೊಳಿಸಿತ್ತು.
ಅಂತಿಮವಾಗಿ ದಿನಕರನ್ ಪ್ರೆಶರ್ ಕುಕ್ಕರ್ ಚಿನ್ಹೆಯೊಂದಿಗೆ ಚುನಾವಣಾ ರಣಾಂಗಣಕ್ಕೆ ಇಳಿಯಲಿದ್ದಾರೆ.
ಇನ್ನು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಬಳಿಕ ಕಳೆದ ಏಪ್ರಿಲ್ ನಲ್ಲಿ ಉುಪ ಚುನಾವಣೆ ಘೋಷಣೆಯಾಗಿತ್ತಾದರೂ, ಹಣಕ್ಕಾಗಿ ಮತದಂತಹ ವ್ಯಾಪಕ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿತ್ತು. ಇದೀಗ ಮತ್ತೆ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದು, ಇದೇ ಡಿಸೆಂಬರ್ 21ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos