ಶ್ರೀನಗರ: ಪೆಲೆಟ್ ಗನ್ ಹೊಡೆತದ ಸಂತ್ರಸ್ತರ ಕುರಿತಾದ ಡಾಕ್ಯುಮೆಂಟರಿ ತಯಾರಿಸುತ್ತಿದ್ದ ಫ್ರೆಂಚ್ ಪತ್ರಕರ್ತನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ.
ವೀಸಾ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಫ್ರೆಂಚ್ ಪತ್ರಕರ್ತ ಕಾಮಿತಿ ಪೌಲ್ ಎಡ್ವರ್ಡ್ ನನ್ನು ಭಾನುವಾರ ಸಂಜೆ ಕೋತಿಬಾಗ್ ನಲ್ಲಿ ಬಂಧಿಸಲಾಗಿದೆ.
ಪೌಲ್ ಎಡ್ವರ್ಡ್ ಶ್ರೀನಗರದಲ್ಲಿ ಪ್ರತ್ಯೇಕತವಾದಿಗಳು ಮತ್ತು ಪೆಲೆಟ್ ಗುಂಡೇಟಿನ ಸಂತ್ರಸ್ತರ ಭೇಟಿ ಮಾಡಿ ಡಾಕ್ಯುಮೆಂಟರಿ ತಯಾರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2016ರ ಜುಲೈ 8ರಂದು ಹಿಜ್ಬುಲ್ ಕಮಾಂಡರ್ ಬುಹ್ರಾನ್ ವಾನಿ ಹತ್ಯೆಯನ್ನು ಖಂಡಿಸಿ ಪ್ರತ್ಯೇಕತವಾದಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗುಂಪನ್ನು ಚದುರಿಸಲು ಭದ್ರತಾ ಪಡೆ ಯೋಧರು ಪೆಲೆಟ್ ಗನ್ ನಿಂದ ಗುಂಡು ಹಾರಿಸಿದ್ದರು. ಇದರಲ್ಲಿ ಹಲವು ಗಂಭೀರವಾಗಿ ಗಾಯಗೊಂಡಿದ್ದರು.
ಎಡ್ವರ್ಡ್ 2018ರ ಡಿಸೆಂಬರ್ 22ರವರೆಗೆ ಬಿಸಿನೆಸ್ ವೀಸಾ ಮೇಲೆ ಭಾರತಕ್ಕೆ ಆಗಮಿಸಿದ್ದರು. ಆದರೆ ಬಿಸಿನೆಸ್ ವೀಸಾ ಮೇಲೆ ಬಂದವರು ರಾಜಕೀಯ ಮತ್ತು ಭದ್ರತೆ ಕುರಿತಾದ ಡಾಕ್ಯುಮೆಂಟರಿಗಳನ್ನು ತಯಾರಿಸುವಂತಿಲ್ಲ. ಇದೇ ಕಾರಣಕ್ಕೆ ಎಡ್ವರ್ಡ್ ರನ್ನು ಬಂಧಿಸಿ ಅವರ ವಿರುದ್ಧ ಸೆಕ್ಷನ್ 14ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.