ಅಹಮದಾಬಾದ್: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ತೀವ್ರ ಟೀಕೆಯ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಅಹಮದಾಬಾದ್ ನಲ್ಲಿರುವ ಜಗನ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಏಕ ಪಕ್ಷೀಯ ಅಭಿವೃದ್ಧಿ ಮಾಡಿದ್ದಾರೆ. ಅವರಿಂದ ಕೇವಲ 5-10 ಜನರ ಅಭಿವೃದ್ಧಿಯಾಗಿದೆ. ಎಲ್ಲರಿಗಾಗಿ ಅವರು ಕೆಲಸ ಮಾಡಿಲ್ಲ. ಆದರೆ ದೇವಸ್ಥಾನಕ್ಕೆ ಭೇಟಿ ನೀಡಿದಾಗೆಲ್ಲಾ ಎಲ್ಲರ ಅಭಿವೃದ್ಧಿಗಾಗಿ, ಗುಜರಾತ್ ಜನತೆಯ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಈಗ ಹೇಳಿ ನಾನು ನಾನು ದೇವಸ್ಥಾನಕ್ಕೆ ಹೋಗುವುದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.
ನನಗೆ ಅವಕಾಶ ಸಿಕ್ಕಾಗಲೆಲ್ಲ ನಾನು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಕೇದಾರನಾಥ್ ದೇವಸ್ಥಾನಕ್ಕೂ ಭೇಟಿ ನೀಡಿದ್ದೇನೆ. ಅದೇನು ಗುಜರಾತ್ ನಲ್ಲಿದೆಯೇ? ಎಂದು ತಮ್ಮ ದೇವಸ್ಥಾನ ಭೇಟಿಯನ್ನು ಗುಜರಾತ್ ಚುನಾವಣೆಗೆ ಥಳಕು ಹಾಕುತ್ತಿರುವ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಜಗನ್ನಾಥ್ ದೇವಸ್ಥಾನದ ಅರ್ಚಕ ದಿಲೀಪ್ ದಾಸ್ ಅವರ ಪ್ರಕಾರ, ರಾಹುಲ್ ಗಾಂಧಿ ಅವರು ದೇವಸ್ಥಾನದ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ ಜಗನ್ನಾಥ್ ದೇವರ ಆರ್ಶೀವಾದ ಪಡೆದರು ಎಂದು ತಿಳಿಸಿದ್ದಾರೆ.