ಗುವಾಹತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು, ಕಳೆದ ಐದು ತಿಂಗಳಲ್ಲಿ ದೇಣಿಗೆಯಾಗಿ ಬಿಜೆಪಿ ಬೊಕ್ಕಸಕ್ಕೆ 80 ಸಾವಿರ ಕೋಟಿ ರುಪಾಯಿ ಹರಿದು ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇರುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಇದನ್ನು ನಾನು ಹೇಳುತ್ತಿಲ್ಲ. ಏಷ್ಯಾದಲ್ಲಿ ನಡೆಸಿದ ಸಮೀಕ್ಷೆಯಿಂದ ಇದು ಬಹಿರಂಗವಾಗಿ ಎಂದು ಫೋರ್ಬಸ್ ನಿಯತಕಾಲಿಕೆ ವರದಿ ಮಾಡಿದೆ ಎಂದು ಹಜಾರೆ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಾನು ಮೌನವಾಗಿದ್ದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಸ್ವಲ್ಪ ಕಾಲವಕಾಶ ನೀಡಬೇಕು. ಹಾಗಾಗಿ ನಾನು ಮೌನವಾಗಿದ್ದೆ. ಆದರೆ ಈಗ ನಾನು ಅವರ ವಿರುದ್ಧ ಮಾತನಾಡುವ ಸಮಯ ಬಂದಿದೆ. ಮಾರ್ಚ್ 23ರಿಂದ ಜನ ಲೋಕಪಾಲ್ ಗಾಗಿ ಮತ್ತು ದೇಶದ ರೈತರಿಗಾಗಿ ನಾನು ಮತ್ತೊಂದು ಚಳುವಳಿ ಆರಂಭಿಸುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಕಳೆದ ಐದು ತಿಂಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ 80 ಸಾವಿರ ಕೋಟಿ ರುಪಾಯಿ ದೇಣಿಗೆ ಹರಿದು ಬಂದಿದೆ. ಜನ ಸಾಮಾನ್ಯರು ಇನ್ನು ಸಮಸ್ಯೆಗಳಲ್ಲೇ ಬಳಲುತ್ತಿದ್ದಾರೆ. ರೈತರು ಸಾಲದಲ್ಲೇ ಕೊಳೆಯುತ್ತಿದ್ದಾರೆ. ಅವರು ಬೆಳೆದ ಬೆಳಗೆ ಸೂಕ್ತ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನಾನು ಪ್ರಧಾನಿ ಮೋದಿ ಅವರಿಗೆ 32 ಪತ್ರಗಳನ್ನು ಬರೆದಿದ್ದೇನೆ. ಆದರೆ ಪ್ರಧಾನಿ ಕಚೇರಿಯಿಂದ ಒಂದಕ್ಕೂ ಉತ್ತರ ಬಂದಿಲ್ಲ ಎಂದು ಹಜಾರೆ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos