ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಗಳನ್ನು ತಿರುಚಲಾಗಿದೆ ಎಂಬ ಕಾಂಗ್ರೆಸ್ ನ ಆರೋಪಕ್ಕೆ ಧ್ವನಿಗೂಡಿಸಿರುವ ಪಾಟೀದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಎಟಿಎಂ ಗಳನ್ನು ತಿರುಚಬಹುದಾದರೆ ಇವಿಎಂ ಗಳನ್ನೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಅಪ್ ಡೇಟ್ ಮಾಡಿರುವ ಹಾರ್ದಿಕ್ ಪಟೇಲ್, ನನ್ನ ಮಾತು ನಗು ತರಿಸಬಹುದು, ಆದರೆ ದೇವರು ಸೃಷ್ಟಿಸಿರುವ ಮನುಷ್ಯನ ದೇಹವನ್ನು ಹಾನಿ ಮಾಡಬಹುದಾದರೆ ಮನುಷ್ಯ ನಿರ್ಮಿಸಿರುವ ಇವಿಎಂ ಗಳನ್ನೇಕೆ ತಿರುಚಲು ಸಾಧ್ಯವಿಲ್ಲ? ಎಟಿಎಂ ಯಂತ್ರಗಳನ್ನು ಹ್ಯಾಕ್ ಮಾಡಬಹುದಾದರೆ ಇವಿಎಂ ಗಳನ್ನೇಕೆ ತಿರುಚಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪಟೇಲ್ ಹಾಗೂ ಆದಿವಾಸಿಗಳಿರುವ ಪ್ರದೇಶಗಳಲ್ಲಿ ಇವಿಎಂ ನ್ನು ತಿರುಚುವ ಯತ್ನ ನಡೆದಿತ್ತು ಎಂದು ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ. ಆದರೆ ಹಾರ್ದಿಕ್ ಪಟೇಲ್ ಆರೋಪವನ್ನು ಅಹಮದಾಬಾದ್ ಜಿಲ್ಲಾಧಿಕಾರಿ ಅವಂತಿಕಾ ಸಿಂಗ್ ತಳ್ಳಿಹಾಕಿದ್ದು, ಈ ಆರೋಪಗಳ ಬಗ್ಗೆ ಸ್ಪಷ್ಟನೆ ಬೇಕಿಲ್ಲ, ಒಂದು ವೇಳೆ ಸ್ಪಷ್ಟನೆ ನೀಡಬೇಕಿದ್ದರೆ ಚುನಾವಣಾ ಆಯೋಗ ನೀಡಲಿದೆ ಎಂದಿದ್ದಾರೆ.