ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಪ್ರಮುಖ ಆದೇಶವನ್ನು ನೀಡಿದ್ದು, ಆಕ್ಷೇಪಾರ್ಹ ಟ್ವೀಟನ್ನು ರಿಟ್ವೀಟ್ ಮಾಡಿದವರೂ ಮಾನಹಾನಿ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಶನಿವಾರ ಹೇಳಿದೆ.
ಆಮ್ ಆದ್ಮಿ ಪಕ್ಷದ ಮುಖಂಡರ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಕ್ಷೇಪಾರ್ಹ ಟ್ವೀಟನ್ನು ರಿಟ್ವೀಟ್ ಮಾಡಿದವರು ಕೂಡ ಮಾನಹಾನಿ ಪ್ರಕರಣ ಎದುರಿ ಸಬೇಕಾಗುತ್ತದೆ ಎಂದು ಹೇಳಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಎಎಪಿ ನಾಯಕ ರಾಘವ್ ಛಡ್ಡಾ ಸೇರಿ ಒಟ್ಟು ಆರು ಮಂದಿ ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕೇಜ್ರಿವಾಲ್ ಮಾಡಿದ್ದ ಟ್ವೀಟ್ ಅನ್ನು ರಾಘವ್ ಛಡ್ಡಾ ರಿಟ್ವೀಟ್ ಮಾಡಿದ್ದರು. ಇನ್ನು ಸುಪ್ರೀಂ ಕೋರ್ಟ್ ನಲ್ಲಿ ರಿಟ್ವೀಟ್ ಮಾಡಿದರೆ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾನೂನಿನಡಿ ಅವಕಾಶ ಇಲ್ಲ ಎಂದು ರಾಘವ್ ಪರ ವಕೀಲರು ವಾದಿಸಿದ್ದರು. ರಿಟ್ವೀಟ್ ಮಾಡಿದ್ದಕ್ಕೆ ಮೊಕದ್ದಮೆ ದಾಖಲಿಸಲು ಯಾವುದೇ ಸೂಕ್ತ ಕಾನೂನು ಇಲ್ಲ. ಇನ್ನೊಬ್ಬರು ಮಾಡಿದ ಟ್ವೀಟನ್ನು ರಿಟ್ವೀಟ್ ಮಾಡುವುದು ಮಾನಹಾನಿ ಹೇಳಿಕೆಗೆ ಸಮ ಎಂದು ಪರಿಗಣಿಸಬಾರದು ಎಂದು ರಾಘವ್ ಪರ ವಕೀಲ ಆನಂದ್ ಗ್ರೋವರ್ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದರು.
ಅದರೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಎ. ಎಂ. ಖಾನ್ ವಿಲ್ಕರ್, ನ್ಯಾ. ಡಿ. ವೈ. ಚಂದ್ರಚೂಡ ಅವರು ಗ್ರೋವರ್ ವಾದವನ್ನು ತಳ್ಳಿಹಾಕಿದ್ದಾರೆ. ಆಕ್ಷೇಪಾರ್ಹ ಹೇಳಿಕೆ ಹೊಂದಿರುವ ಟ್ವೀಟ್ ಒಂದನ್ನು ರಿಟ್ವೀಟ್ ಮಾಡಿದ ವ್ಯಕ್ತಿ ಅದಕ್ಕೆ ಜವಾಬ್ದಾರನಾಗಿರುತ್ತಾನೆ. ಆತ ಟ್ವೀಟ್ ಓದಿಕೊಂಡು, ಅರಿವಿದ್ದೇ ರಿಟ್ವೀಟ್ ಮಾಡಿರುತ್ತಾನೆ. ಹೀಗಾಗಿ ಮೂಲ ಸಂದೇಶ ಯಾರು ಟ್ವೀಟ್ ಮಾಡಿದ್ದಾರೋ ಅವರ ವಿರುದ್ಧ ಕೈಗೊಳ್ಳುವ ಕ್ರಮವನ್ನು ರಿಟ್ವೀಟ್ ಮಾಡಿದವರ ಮೇಲೂ ಅನ್ವಯಿಸಬಹುದು. ಹೀಗಾಗಿ ರಿಟ್ವೀಟ್ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲು ಅಡ್ಡಿಯಿಲ್ಲ ಎಂದು ಕೋರ್ಟ್ ಹೇಳಿದೆ.
ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದ ಸಂದರ್ಭ ಜೇಟ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು. ಈ ಕುರಿತ ಟ್ವೀಟನ್ನು ಹಲವರು ರಿಟ್ವೀಟ್ ಮಾಡಿದ್ದರು. ಕೇಜ್ರಿವಾಲ್, ಅಶುತೋಶ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಛಡ್ಡಾ ವಿರುದ್ಧ ಅರುಣ್ ಜೇಟ್ಲಿ ಮಾನಹಾನಿ ಪ್ರಕರಣ ದಾಖಲಿಸಿ 10 ಕೋಟಿ ರೂ. ಪರಿಹಾರ ಕೋರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos