ನವದೆಹಲಿ: ಗುಜರಾತ್ ಜನತೆ ಜಾತಿ ವಿಷ ಬೀಜದಿಂದ ಹೊರ ಬಂದು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ವಿಜಯ ಸಾಮಾನ್ಯವಾದುದ್ದಲ್ಲ, ಅಸಾಮಾನ್ಯವಾದದ್ದು. 1995ರಿಂದ ಬಿಜೆಪಿ ಗುಜರಾತ್ ನಲ್ಲಿ ನಿರಂತರವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದೆ. ಇದು ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ ಎಂದರು.
ನಾನು ಗುಜರಾತ್ ನಿಂದ ಹೊರ ಬಂದ ಮೇಲೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ನನ್ನ ಜೊತೆಗಾರರು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಗುಜರಾತ್ ನಲ್ಲಿ ಬಿಜೆಪಿಯನ್ನು ಸೋಲಿಸಲು ಷಡ್ಯಂತ್ರ ರೂಪಿಸಲಾಗಿತ್ತು. ಇದೇ ವೇಳೆ ನಾಲ್ಕು ದಿಕ್ಕುಗಳಿಂದಲೂ ನನ್ನು ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಆದರೆ ಎರಡು ರಾಜ್ಯಗಳ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ. ಗುಜರಾತ್ ಜನ ಜಾತಿ ವಿಷ ಬೀಜದಿಂದ ಹೊರಬಂದು ಬಿಜೆಪಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯದ ಆರು ಕೋಟಿ ಗುಜರಾತಿಗಳು ಒಂದೇ ಅವರ ಉದ್ದೇಶ ಪ್ರಗತಿಯ ಪಥದಲ್ಲಿ ಮುಂದುವರಿಸಲು ಬಯಸಿದ್ದಾರೆ. ಪ್ರತಿಯೊಬ್ಬ ಗುಜರಾತಿ ಸಹ ನಾವೆಲ್ಲೂ ಒಂದೇ ಎಂಬ ಆಲೋಚನೆ ಹೊಂದಿದ್ದು ನಾವು ಅವರನ್ನು ವಿಂಗಡಿಸಲು ಸಾಧ್ಯವಿಲ್ಲ. ಏನೇ ಆದರೂ ಅದನ್ನು ಮರೆತುಬಿಡಿ ಕೇವಲ ಏಕತೆ ಮತ್ತು ಸಹೋದರತ್ವವನ್ನು ಮಾತ್ರ ಆಲೋಚಿಸಿ ಎಂದು ಹೇಳಿದ್ದಾರೆ.