ನವದೆಹಲಿ: ಪಕ್ಷದ ಒಳಗೆ ಮತ್ತು ಹೊರಗೆ ಯುವಕರನ್ನು ಹುರಿದುಂಬಿಸುವಂತೆ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಸಭೆಯ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಅವರು, ಪ್ರತಿ ವೇದಿಕೆಯಲ್ಲಿಯೂ ಯುವಕರನ್ನು ಮುಂದೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. 2000ನೇ ಇಸವಿ ನಂತರ ಜನಿಸಿದ ಮತದಾರರ ಬಗ್ಗೆ ಅವರು ಮಾತನಾಡಿದರು ಎಂದರು.
ದೇಶ ಸೇವೆಯಲ್ಲಿ, ಸಮಾಜದ ಬೆಳವಣಿಗೆಯಲ್ಲಿ ಯುವ ಮತದಾರರು ಭಾಗಿಯಾಗಬೇಕು ಎಂದು ಪ್ರಧಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ಜನರ ಸೇವೆಯಲ್ಲಿ ಪ್ರಧಾನಿ ಮೋದಿಯವರ ಬೆಂಬಲವನ್ನು ಶ್ಲಾಘಿಸಿದ ಸಚಿವ ಅನಂತ್ ಕುಮಾರ್, ಬಿಜೆಪಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಜನರ ಬೆಂಬಲದಿಂದ ವಿಜಯದ ಕಡೆಗೆ ಚಲಿಸಬೇಕು. ವಿರೋಧ ಪಕ್ಷಗಳ ಟೀಕೆಗಳಿಗೆ ವಿಚಲಿತರಾಗಬಾರದು ಎಂದು ಪ್ರಧಾನಿ ಸಭೆಯಲ್ಲಿ ಕಿವಿಮಾತು ಹೇಳಿದರು ಎಂದರು.
ಗುಜರಾತ್ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಪಟ್ಟ ಶ್ರಮದ ಬಗ್ಗೆ ಮಾತನಾಡುವಾಗ ಭಾವುಕರಾದ ಪ್ರಧಾನಿ, 1991ರಲ್ಲಿ ಗುಜರಾತ್ ನಲ್ಲಿ ಗೆದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತಮ್ಮನ್ನು ಸಂತೋಷದಿಂದ ಅಪ್ಪಿಕೊಂಡು ತಮ್ಮ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದ್ದನ್ನು ನೆನಪು ಮಾಡಿಕೊಂಡರು. ಅಮಿತ್ ಶಾ ಅವರು ಪಕ್ಷದಲ್ಲಿ ಮೌನದಿಂದ ಕೆಲಸ ಮಾಡುವವರು ಎಂದು ಪ್ರಧಾನಿ ಶ್ಲಾಘಿಸಿದರು ಎಂದು ಸಚಿವ ಅನಂತ್ ಕುಮಾರ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos