ಸ್ಪರ್ಧಾತ್ಮಕ ದರ ಅಳವಡಿಕೆಗೆ ಮುಂದಾದ ರೈಲ್ವೆ ಇಲಾಖೆ
ನವದೆಹಲಿ: ದೀಪಾವಳಿ, ದುರ್ಗಾ ಪೂಜೆಯಂತಹ ಹಬ್ಬಗಳ ಸಂದರ್ಭದಲ್ಲಿ ಪ್ರೀಮಿಯಂ ಶುಲ್ಕಗಳು, ಪ್ರೈಮ್ ಅವಧಿಯಲ್ಲದ ತಡರಾತ್ರಿಯ ಪ್ರಯಾಣಕ್ಕೆ ರಿಯಾಯಿತಿಗಳು, ಕಡಿಮೆ ಜನಸಂದಣಿಯ ಮಾರ್ಗ ಮತ್ತು ರೈಲುಗಳು ಹೀಗೆ ನಾನಾ ವಿಭಾಗಗಳಲ್ಲಿ ಕ್ರಿಯಾತ್ಮಕ ದರಗಳನ್ನು ಜಾರಿಗೆ ತರಲು ರೈಲ್ವೆ ಬೋರ್ಡ್ ಚಿಂತನೆ ನಡೆಸಿದೆ.
ಕಳೆದ ವಾರ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪರ್ಧಾತ್ಮಕ ದರದ ಅಗತ್ಯತೆಯನ್ನು ವಿವರಿಸಿದರು.
ರಾಷ್ಟ್ರದ ಪ್ರಮುಖ ಮೂರು ರೈಲ್ವೆ ವಲಯಗಳಾದ - ಪೂರ್ವ, ಪಶ್ಚಿಮ ಮತ್ತು ಪಶ್ಚಿಮ ಕೇಂದ್ರ ವಲಯಗಳು ಈ ರೀತಿಯ ಕ್ರಿಯಾತ್ಮಕ ಅಥವಾ ಸ್ಪರ್ಧಾತ್ಮಕ ಬೆಲೆಗಳ ಜಾರಿಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿವೆ, ಪ್ರಯಾಣಿಕರಿಗೆ ಅನುಕೂಲವಲ್ಲದ ಸಮಯಗಳಲ್ಲಿ ಗಮ್ಯವನ್ನು ತಲುಪುವ ರೈಲುಗಳಿಗೆ ರಿಯಾಯಿತಿಗಳನ್ನು ನೀಡಬೇಕು, ಉದಾಹರಣೆಗೆ 0000-0400 ಅಥವಾ 1300-1700 ಗಂಟೆಗಳ ನಡುವೆ ಆಗಮಿಸುವ ರೈಲುಗಳು. 10ರಿಂದ 30 ಶೇಕಡಾ ರಿಯಾಯಿತಿಗಳನ್ನು ಮೊದಲ ಮತ್ತು ಕೊನೆಯ ನಿಲ್ದಾಣದಲ್ಲಿ ಖಾಲಿಯಾಗುವ ಬರ್ತ್ ಗಳಿಗೆ ನೀಡಬೇಕು ಎಂದು ಈ ವಲಯಗಳು ಸಲಹೆ ನೀಡಿದೆ.
ಬೇರೆ ಬೇರೆ ವಲಯಗಳು ಗರಿಷ್ಠ ಸಂಖ್ಯೆಯ ಜನರು ರೈಲ್ವೆ ಸೇವೆ ಬಳಸುವ ದಿನಗಳಲ್ಲಿ ಮತ್ತು ಉತ್ಸವ ಹಬ್ಬಗಳ ಸಮಯದಲ್ಲಿ ಪ್ರೀಮಿಯಂ ಶುಲ್ಕಕ್ಕಾಗಿ (10-20 ಪ್ರತಿಶತ ಹೆಚ್ಚುವರಿ) ಬೇಡಿಕೆ ಇಟ್ಟಿವೆ. ವಾರಾಂತ್ಯದಲ್ಲಿ ಮತ್ತು ದೀಪಾವಳಿ, ದುರ್ಗಾ ಪೂಜಾ,ಮತ್ತು ಕ್ರಿಸ್ಮಸ್ ಮುಂತಾದ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ಆಗಮಿಸುವ ಕಾರಣ ಈ ಅವಧಿಯಲ್ಲಿ ಹೆಚ್ಚುವರಿ ಶುಲ್ಕ ವಿಧಿಸಬಹುದು, ಎಂದು ಅವುಗಳುಇ ಅಭಿಪ್ರಾಯಪಟ್ಟಿವೆ.
ಪ್ರೀಮಿಯಂ ದರಪಟ್ಟಿ ಮತ್ತು ರಿಯಾಯಿತಿಗಳ ಮೂಲಕ ಸ್ಪರ್ಧಾತ್ಮಕ ಬೆಲೆಗಳನ್ನು ಪರಿಚಯಿಸುವ ಕುರಿತಂತೆ ಅಂತಿಮ ನಿರ್ಧಾರವನ್ನು ಡಿಸೆಂಬರ್ 31 ರೊಳಗೆ ತಿಳಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos