ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಭಾನುವಾರ ಆರಂಭಗೊಂಡಿದ್ದು, ಮತ ಎಣಿಕೆ ಹಿನ್ನಲೆಯಲ್ಲಿ ತಮಿಳುನಾಡಿನಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಮರೀನಾ ಬೀಚ್ ಬಳಿಯಿರುವ ರಾಣಿ ಮೇರಿ ಕಾಲೇಜಿನಲ್ಲಿ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಒಟ್ಟು 19 ಸುತ್ತುಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರಸ್ತತದ ಬೆಳವಣಿಗೆಯಂತೆ ಸ್ವತಂತ್ರ ಅಭ್ಯರ್ಥಿಯಾಗಿರುವ ಟಿಟಿವಿ ದಿನಕರನ್ ಅವರು ಮುನ್ನಡೆ ಸಾಧಿಸಿದ್ದಾರೆಂದು ತಿಳಿದುಬಂದಿದೆ.
ಶಶಿಕಲಾ ನಟರಾಜನ್ ಬಣದ ಅಭ್ಯರ್ಥಿಯಾಗಿರುವ ದಿನಕರನ್ ಅವರು 6.200 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಎಐಎಡಿಎಂಕೆ ಅಭ್ಯರ್ಥಿ ಮಧುಸೂತನ್ ಹಾಗೂ ಡಿಎಂಕೆ ಅಭ್ಯರ್ಥಿ ಗಣೇಶನ್ ಅವರನ್ನು ಹಿಂದಿಕ್ಕಿದ್ದಾರೆ.
ಜಯಲಲಿತಾ ಅವರು ನಿಧನ ಹೊಂದಿದ್ದರಿಂದಾಗಿ ಚೆನ್ನೈನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇಧೇ 21ರಂದು ಉಪಚುನಾವಣೆಯನ್ನು ನಡೆಸಲಾಗಿತ್ತು. ಶೇ.73.45ರಷ್ಟು ಮತದಾನವಾಗಿತ್ತು.
ಮತ ಎಣಿಕೆ ಹಿನ್ನಲೆಯಲ್ಲಿ ತಮಿಳುನಾಡಿನಾದ್ಯಂತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, 4000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಜಯಲಲಿತಾ ಅವರ ಸಾವಿನ ಬಳಿಕ ಎಐಎಡಿಎಂಕೆ ಪಕ್ಷ ಇಬ್ಭಾಗವಾಗಿದ್ದು, ಈ ಉಪಚುನಾವಣೆ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಶಶಿಕಲಾ ಬಳಗಳಿಗೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ. ಪಳನಿಸ್ವಾಮಿ ಬಣದಿಂದ ಹಿರಿಯ ನಾಯಕ ಎ.ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಹಾಗೂ ಡಿಎಂಕೆ ಪಕ್ಷದಿಂದ ಮರುಧು ಗಣೇಶ್ ಕಣದಲ್ಲಿ ನಿಂತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos