ಸೋನಿಪತ್/ಹರಿಯಾಣ: ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ ಆಧಾರ್ ಕಾರ್ಡ್ ತರಲಿಲ್ಲವೆಂದು ತುಲೀಪ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದು ಆಕೆ ಮೃತಪಟ್ಟಿದ್ದಾರೆ.
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಕಾರ್ಗಿಲ್ ನ 8ನೇ ಜಟ್ ರೆಜಿಮೆಂಟ್ ನಲ್ಲಿ ಯೋಧರಾಗಿದ್ದ ಹವಾಲ್ದಾರ್ ಲಕ್ಷ್ಮಣ್ ದಾಸ್ ಅವರು ಯುದ್ಧದಲ್ಲಿ ಹುತಾತ್ಮರಾಗಿದ್ದರು. ಅವರ ಪತ್ನಿ ಶಕುಂತಲಾ ಅವರು ಇಂದು ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಬಿಟ್ಟಿದ್ದಾರೆ.
ಶಕುಂತಲಾ ದೇವಿ ಅವರು ಗಂಟಲು ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಅವರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ತುಲೀಪ್ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ನನ್ನ ತಾಯಿಗೆ ಚಿಕಿತ್ಸೆ ನೀಡಿ ಎಂದು ಕೇಳಿದಾಗ ಆಸ್ಪತ್ರೆಯ ವೈದ್ಯರು ಆಧಾರ್ ಕಾರ್ಡ್ ಕೇಳಿದರು. ಆಗ ನನ್ನ ಬಳಿ ಅವರು ಆಧಾರ್ ಕಾರ್ಡ್ ಇರಲಿಲ್ಲ. ಆದರೆ ಫೋನಿನಲ್ಲಿದ್ದ ಆಧಾರ್ ಪ್ರತಿಯ ಫೋಟೋ ತೋರಿಸಿದೆ. ಇದನ್ನು ವೈದ್ಯರು ಒಪ್ಪಲಿಲ್ಲ. ಅವರು ಮೂಲ ಪ್ರತಿಯನ್ನು ತೋರಿಸುವಂತೆ ಪಟ್ಟು ಹಿಡಿದರು ಹೀಗಾಗಿ ನನ್ನ ತಾಯಿ ಮೃತಪಟ್ಟಿದ್ದಾರೆ ಎಂದು ಪವನ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು ಆಸ್ಪತ್ರೆಗೆ ಯಾರನ್ನು ಕರೆದುಕೊಂಡು ಬಂದಿರಲಿಲ್ಲ. ಆಧಾರ್ ಕಾರ್ಡ್ ಗೋಸ್ಕರ ಚಿಕಿತ್ಸೆ ನೀಡಲು ನಿರಾಕರಿಸಿಲ್ಲ. ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದು ಕೇವಲ ದಾಖಲೀಕರಣಕ್ಕಾಗಿ ಹೊರತು ಚಿಕಿತ್ಸೆಗಾಗಿ ಅಲ್ಲ ಎಂದು ಹೇಳಿದ್ದಾರೆ.
ಆಧಾರ್ ಕಾರ್ಡ್ ತರಲಿಲ್ಲವೆಂದು ಕಾರ್ಗಿಲ್ ಹುತಾತ್ಮ ಯೋಧನ ಪತ್ನಿಗೆ ಚಿಕಿತ್ಸೆಗೆ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಆದೇಶಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos