ತಮಿಳುನಾಡು ಮಾಜಿ ಸಿಎಂ ಜಯಲಲಿತಾ
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಮೃತಪಟ್ಟ 2 ತಿಂಗಳ ನಂತರ ಲಂಡನ್ ವೈದ್ಯರು ಸುದ್ದಿಗೋಷ್ಠಿ ನಡೆಸಿದ್ದು, ಜಯಾ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಜಯಲಲಿತಾ ಅವರು ರಕ್ತದ ಸೋಂಕಿನಿಂದ ಬಳಲುತ್ತಿದ್ದರು. ರಕ್ತ ಕೆಟ್ಟಿತ್ತು, ಜೊತೆಗೆ ಮಧುಮೇಹ ತೀವ್ರಗೊಂಡಿತ್ತು ಎಂದು ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದ ಲಂಡನ್ ವೈದ್ಯ ಡಾ. ರಿಚರ್ಡ್ ಬೀಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತೀವ್ರ ಮಧುಮೇಹ ಇದ್ದದ್ದು ಚಿಕಿತ್ಸೆಗೆ ಅಡ್ಡಿಯಾಗಿತ್ತು. ಪರಿಣಾಮವಾಗಿ ವಿಷಕಾರಿ ಅಂಶಗಳನ್ನು ಹೊಂದಿದ್ದ ರಕ್ತ ಹೃದಯಕ್ಕೆ ಸೇರಿ ಹೃದಯ ಸ್ತಂಭನ ಉಂಟಾಗಿತ್ತು ಎಂದು ರಿಚರ್ಡ್ ಬೀಲೆ ಮಾಹಿತಿ ನೀಡಿದ್ದಾರೆ.
ಜಯಲಲಿತಾ ಅವರ ಸಾವಿನ ಬಗ್ಗೆ ವಿವಾದಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವುದಾಗಿ ತಿಳಿಸಿರುವ ವೈದ್ಯರು ಜಯಲಲಿತಾ ಅವರಿಗೆ ಅಂಗಗಳನ್ನು ಕಸಿ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಮಧುಮೇಹ ಹೆಚ್ಚಾದಾಗ ಸೋಂಕನ್ನು ತಡೆಗಟ್ಟುವುದು ಕಷ್ಟ, ಸೋಂಕು ಕೆಲವೇ ಗಂಟೆಗಳಲ್ಲಿ ದೇಹವನ್ನು ವ್ಯಾಪ್ತಿಸುತ್ತದೆ.
ತಮಿಳುನಾಡು ಸಿಎಂ ಸ್ಥಾನಕ್ಕೆ ಒ.ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿ, ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಯಲಲಿತಾ ಆಪ್ತೆ ವಿಕೆ ಶಶಿಕಲಾ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಲಂಡನ್ ವೈದ್ಯರು ಜಯಲಲಿತಾ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos