ನವದೆಹಲಿ: ನೋಟುಗಳ ಅಮಾನ್ಯತೆಯನ್ನು ವಿರೋಧಿಸುವ ವಿರೋಧ ಪಕ್ಷಗಳ ಟೀಕೆಯನ್ನು ಖಂಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ವಿಷಯದ ಕುರಿತು ಚರ್ಚಿಸುವ ಬದಲು ವಿರೋಧ ಪಕ್ಷಗಳು ಚಾನೆಲ್ ಗಳ ಜೊತೆ ಮಾತನಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿವೆ ಎಂದು ಹೇಳಿದ್ದಾರೆ.
ಮೊದಲನೇ ದಿನದಿಂದಲೂ ನೋಟುಗಳ ಅಮಾನ್ಯತೆ ನಮ್ಮಲ್ಲಿ ಸ್ಪಷ್ಟತೆಯಿದೆ ಮತ್ತು ಇದರ ಕುರಿತು ಚರ್ಚೆಗೆ ಕೂಡ ಸಿದ್ಧರಿದ್ದೇವೆ. ಆದರೆ ವಿರೋಧ ಪಕ್ಷದ ನಾಯಕರು ಸುದ್ದಿ ವಾಹಿನಿಗಳ ಮುಂದೆ ಮಾತನಾಡುವುದು ಬಿಟ್ಟರೆ ಚರ್ಚೆ ಮಾಡಿಲ್ಲ ಎಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡುವಾಗ ಹೇಳಿದರು.
ನೋಟುಗಳ ನಿಷೇಧ ನಿರ್ಧಾರವನ್ನು ಸರಿಯಾದ ಸಮಯದಲ್ಲಿಯೇ ತೆಗೆದುಕೊಳ್ಳಲಾಗಿದೆ ಎಂದ ಪ್ರಧಾನಿ, ನೀವು ಆಪರೇಶನ್ ಯಾವಾಗ ಮಾಡಿಕೊಳ್ಳುತ್ತೀರಿ, ಆಪರೇಶ
ನ್ ಮಾಡಿಸಿಕೊಳ್ಳಲು ದೇಹದ ಆರೋಗ್ಯ ಚೆನ್ನಾಗಿದೆ ಎಂದುಕೊಳ್ಳುವಾಗ ಮಾಡಿಸಿಕೊಳ್ಳುತ್ತೇವೆ. ಅದೇ ರೀತಿ ನಾವು ಕೂಡ ಸರಿಯಾದ ಸಂದರ್ಭದಲ್ಲಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ನೋಟುಗಳ ಅಮಾನ್ಯತೆಯನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಹೋಲಿಕೆ ಮಾಡಿದ ಪ್ರಧಾನಿ, ''ಸ್ವಚ್ಛ ಭಾರತದಂತೆ ಭಾರತವನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದಿಂದ ಸ್ವಚ್ಛ ಮಾಡಲು ನೋಟುಗಳ ಅಮಾನ್ಯತೆ ಮಾಡಲಾಗಿದೆ'' ಎಂದರು.
ಸ್ವಚ್ಛ ಭಾರತ ಅಭಿಯಾನವನ್ನು ಟೀಕಿಸಿ ಅದನ್ನು ರಾಜಕೀಯಗೊಳಿಸುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ, ಸ್ವಚ್ಛ ಮಾಡುವ ವಿಷಯವನ್ನೂ ರಾಜಕೀಯಗೊಳಿಸುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ಯಾಕೆ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬಾರದು ಎಂದು ಪ್ರಶ್ನಿಸಿದರು.