ದೇಶ

ಕಾನೂನು ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿರುವ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್

Srinivas Rao BV
ನವದೆಹಲಿ: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಯ ವಿಷಯದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. 
ಹಿರಿಯ ವಕೀಲ ಸೋಲಿ ಸೊರಾಬ್ಜಿ ಸೇರಿದಂತೆ ಇನ್ನೂ ಇಬ್ಬರು ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಹೊಸ ಸರ್ಕಾರ ರಚನೆಗೆ ಯಾರಿಗೆ ಅವಕಾಶ ನೀಡುವುದರ ಬಗ್ಗೆ ತೀರ್ಮಾನಿಸಲಿದ್ದಾರೆ. 
ಕೇಂದ್ರ ಸರ್ಕಾರಕ್ಕೆ ತಾವೇ ಪತ್ರದಲ್ಲಿ ತಿಳಿಸಿರುವಂತೆ ವಿದ್ಯಾಸಾಗರ್ ರಾವ್ ಫೆ.5 ರಂದು ತಮಿಳುನಾಡು ಸಿಎಂ ಹುದ್ದೆಗೆ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ ಬಳಿಕ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಮಾಜಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಹಾಗೂ ಸಾಂವಿಧಾನಿಕ ತಜ್ಞ ಸೊರಾಬ್ಜಿಯವರಿಂದ ಸಲಹೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. 
ಮೂವರು ತಜ್ಞರ ಪೈಕಿ ಇಬ್ಬರು ಹೊಸ ಸರ್ಕಾರ ರಚನೆಗೆ ಅವಕಾಶ ನೀಡಲು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಮಾರ್ಗವನ್ನು ಸೂಚಿಸಿದ್ದರೆ. 1998 ರಲ್ಲಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಗೆ ಇಬ್ಬರು ಹಕ್ಕು ಮಂಡಿಸಿದ್ದ ವೇಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈಗ ಇದೇ ಮಾದರಿಯನ್ನು ತಮಿಳುನಾಡಿನಲ್ಲೂ ಅನುಸರಿಸಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ಸೊರಾಬ್ಜಿಯವರ ಪ್ರಕಾರ ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿ, ಹಕ್ಕು ಮಂಡಿಸಿರುವ ಇಬ್ಬರು ನಾಯಕರ ಪೈಕಿ ಅತಿ ಹೆಚ್ಚು ಶಾಸಕರು ಯಾರನ್ನು ಬೆಂಬಲಿಸುತ್ತಾರೋ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ. ಒಟ್ಟಾರೆ ಕಾನೂನು ತಜ್ಞರ ಅಭಿಪ್ರಾಯ ಪಡೆದ  ನಂತರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. 
SCROLL FOR NEXT