ನವದೆಹಲಿ: 2014 ರ ಚುನಾವಣೆ ಬಳಿಕ ರಚನೆಯಾದ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನನಗೆ ಅಲ್ಪಸಂಖ್ಯಾತ ಖಾತೆಯ ಸ್ವತಂತ್ರ ನಿರ್ವಹಣೆ ನೀಡಿದ್ದು, ವಿಚಿತ್ರ ಎನಿಸಿತ್ತು, ಏಕೆಂದರೆ ಅಲ್ಪಸಂಖ್ಯಾತಳೆಂಬ ಭಾವನೆ ನನ್ನಲ್ಲಿ ಇರಲಿಲ್ಲ ಎಂದು ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.
ಅಲ್ಪಸಂಖ್ಯಾತ ಇಲಾಖೆ ಖಾತೆಯ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಬಹುಶಃ ಈಶಾನ್ಯ ರಾಜ್ಯದವರಿಗೆ ನೀಡಬೇಕೆಂದುಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ನನಗೆ ನೀಡಿದಾಗ " ನಾನು ಅಲ್ಪಸಂಖ್ಯಾತಳಲ್ಲ" ಎಂದು ಪ್ರಧಾನಿಗೆ ಹೇಳಿದ್ದನ್ನು ನಜ್ಮಾ ಹೆಫ್ತುಲ್ಲಾ ನೆನಪಿಸಿಕೊಂಡಿದ್ದಾರೆ.
ಐಬಿಎಸ್ ಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ನಜ್ಮಾ ಹೆಫ್ತುಲ್ಲಾ, ಅಲ್ಪಸಂಖ್ಯಾತ ಖಾತೆ ಸಚಿವಳಾಗುವವರೆಗೂ ನನ್ನಲ್ಲಿ ನಾನು ಅಲ್ಪಸಂಖ್ಯಾತಳೆಂಬ ಭಾವನೆ ಇರಲಿಲ್ಲ. ನಾನು ಭಾರತೀಯಳೆಂಬ ಭಾವನೆ ಇದೆ. ಭಾರತದಲ್ಲಿ ಜನ್ಮಿಸಿದ್ದರ ಬಗ್ಗೆ ಹೆಮ್ಮೆ ಇದೆ, ಇಲ್ಲಿನ ವೈವಿಧ್ಯತೆಯಲ್ಲಿ ನಾವೂ ಒಂದು ಎಂಬ ಭಾವನೆ ಇದೆ ಎಂದು ಹೇಳಿದ್ದಾರೆ.