ಲಾಹೋರ್: ಉಗ್ರ ಹಫೀಜ್ ಸಯೀದ್ ಪಾಕಿಸ್ತಾನಕ್ಕೆ ಅಪಾಯಕಾರಿ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮಹಮದ್ ಆಸಿಫ್ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಖ್ವಾಜಾ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಲವು ರಾಜಕೀಯ, ಧಾರ್ಮಿಕ ಮುಖಂಡರು, ಖ್ವಾಜಾ ಅವರನ್ನು ಭಾರತದ ಮುಖವಾಣಿ ಎಂದು ಆರೋಪಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ದಿ ನ್ಯೂಸ್ ಇಂಟರ್ ನ್ಯಾಷನಲ್ ವರದಿಯ ಪ್ರಕಾರ, ಪಾಕಿಸ್ತಾನದ ಹಲವು ನಾಯಕರು, ಧಾರ್ಮಿಕ ಮುಖಂಡರು ಹಫೀಜ್ ಸಯೀದ್ ನನ್ನು ಪಾಕಿಸ್ತಾನದ ಮಹಾನ್ ದೇಶ ಭಕ್ತ ಎಂದು ಹೇಳಿದ್ದು, ಖ್ವಾಜಾ ಅವರ ಹೇಳಿಕೆಗೆ ಯಾವುದೇ ಆಧಾರವಿಲ್ಲ ಎಂದಿದ್ದಾರೆ.
ಪಾಕಿಸ್ತಾನ ರಕ್ಷಣಾ ಪರಿಷತ್ ನ ಅಧ್ಯಕ್ಷ ಮೌಲಾನಾ ಸಮಿ-ಉಲ್-ಹಕ್ ಖ್ವಾಜಾ ಹೇಳಿಕೆಯನ್ನು ಟೀಕಿಸಿದ್ದು, ಖ್ವಾಜಾ ಬಹುಶಃ ಜರ್ಮನಿಯಲ್ಲಿ ಬೆಳೆದವರಿರಬೇಕು ಎಂದಿದ್ದಾರೆ. ಇನ್ನು ರಕ್ಷಣಾ ಪರಿಷತ್ ನ ಮತ್ತೋರ್ವ ಸದಸ್ಯ ಶಾ-ಝೈನ್ ಬುಗಟಿ ಹಫೀಜ್ ಸಯೀದ್ ನ ಬಂಧನ ಕಾಶ್ಮೀರಿಗಳ ಹೋರಾಟ ಕುಸಿಯುವಂತೆ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಖ್ವಾಜಾ ಅವರ ಹೇಳಿಕೆಯನ್ನು ಪ್ರಧಾನಿ ನವಾಜ್ ಷರೀಫ್ ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಾರೆ.