ದೇಶ

ಪಾಕ್ ಜೈಲಿನಲ್ಲಿ ಭಾರತೀಯನ ನರಕ ಯಾತನೆ: ವರದಿ ಕೇಳಿದ ಸುಷ್ಮಾ ಸ್ವರಾಜ್

Manjula VN

ನವದೆಹಲಿ: ಬರೋಬ್ಬರಿ 32 ವರ್ಷಗಳಿಂದಲೂ ಪಾಕಿಸ್ತಾನ ಜೈಲಿನಲ್ಲಿ ಭಾರತೀಯ ಪ್ರಜೆಯೊಬ್ಬ ನರಕ ಯಾತನೆ ಅನುಭವಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ವರದಿ ಸಲ್ಲಿಸಿರುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಸೂಚನೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಎಮ್ಮೆ ಮೇಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ನಾನಕ್ ಸಿಂಗ್ ಎಂಬುವವರು ಪಾಕಿಸ್ತಾನದ ಗಡಿ ಪ್ರವೇಶ ಮಾಡಿಬಿಟ್ಟಿದ್ದರು. 1985ರಲ್ಲಿ ಪಾಕಿಸ್ತಾನದ ಯೋಧರು ನಾನಕ್ ಸಿಂಗ್ ಅವರನ್ನು ಬಂಧನಕ್ಕೊಳಪಡಿಸಿದ್ದರು. ನಾನಕ್ ಕಣ್ಮರೆಯಾದಾಗಿನಿಂದಲೂ ಕುಟುಂಬಸ್ಥರು ಸಾಕಷ್ಟು ರೋಧಿಸುತ್ತಿದ್ದರು.

ಈ ಪ್ರಕರಣವನ್ನು ಗಮನಿಸಿದ್ದ ಖಾಸಗಿ ದಿನಪತ್ರಿಕೆಯೊಂದು ವರದಿ ಮಾಡಿತ್ತು. ವರದಿಯನ್ನು ಗಮನಿಸಿರುವ ಸುಷ್ಮಾ ಸ್ವರಾಜ್ ಅವರು ಇದೀಗ ಸ್ಪಂದನೆ ನೀಡಿದ್ದಾರೆ.

ಪ್ರಕರಣ ಸಂಬಂಧ ಇಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪತ್ರಿಕೆಯ ವರದಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಪಾಕಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾನಕ್ ಸಿಂಗ್ ಅವರು ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿ ಕಳೆದ 32 ವರ್ಷಗಳಿಂದಲೂ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪಾಕಿಸ್ತಾನದ ಕಡೆಯಿಂದಲೂ ಧನಾತ್ಮಕ ಪ್ರತಿಕ್ರಿಯೆ ಬರುತ್ತಿದ್ದು, ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್, ಅಜಿಜುಲ್ಲಾ ಖಾನ್ ಅವರು, ಈಗಾಗಲೇ ಸಿಂಗ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿದ್ದು, ನಾನಕ್ ಸಿಂಗ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಪತ್ರ ಸಲ್ಲಿಸುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.

SCROLL FOR NEXT