ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದ ಒ.ಪನ್ನೀರ್ ಸೆಲ್ವಂ ಅವರಿಗೆ ಡಿಎಂಕೆ ಬೆಂಬಲ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಸಾವಿನ ಕುರಿತು ಕೂಡಲೇ ತನಿಖೆ ನಡೆಸುವಂತೆ ಶನಿವಾರ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಡಿಎಂಕೆ ವಕ್ತಾರ ಎ. ಶರವಣನ್ ಅವರು, ನಮ್ಮ ನಾಯಕರು ಕಟ್ಟಳೆಗೊಳಪಡದ ನಾಯಕರಾಗಿದ್ದಾರೆ. ಈಗ ಮಾತ್ರವಷ್ಟೇ ಅಲ್ಲ. ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗಿನಿಂದಲೂ ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಜಯಲಲಿತಾ ನಿಧನದ ಬಳಿಕವೂ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದರು. ಏಮ್ಸ್ ವೈದ್ಯರಿದ್ದಾಗಲೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರೂ ಕೂಡ ತನಿಖೆಗೆ ಆಗ್ರಹಿಸುತ್ತಿದ್ದು, ಇದು ನಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಜಯಲಲಿತಾ ಅವರ ಸಾವಿನ ಹಿಂದೆ ಸಾಕಷ್ಟು ನಿಗೂಢತೆಗಳು ಅಡಗಿವೆ. ಹೀಗಾಗಿ ಸಾವಿನ ಕುರಿತು ತನಿಖೆ ನಡೆಯಲೇಬೇಕಿದೆ. ಯಾವ ಕಾರಣಕ್ಕೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು:? ದಾಖಲೆಯ ಹಿಂದಿರುವ ಕಾರಣವೇನು? ದಾಖಲಾದ ಬಳಿಕ ಆಕೆಗೆ ಯಾವ ರೀತಿಯ ಚಿಕಿತ್ಸೆಗಳನ್ನು ನೀಡಲಾಯಿತು? ಎಂಬುದರ ಕುರಿತಂತೆ ತನಿಖೆ ನಡೆಯಲೇಬೇಕಿದೆ ಎಂದು ತಿಳಿಸಿದ್ದಾರೆ.