ಹೈದರಾಬಾದ್: ಪ್ರವಾಸಕ್ಕೆಂದು ತೆರಳಿದ್ದ ರಾಜ್ಯದ ಪ್ರವಾಸಿಗನೊಬ್ಬ ನಿರ್ಬಂಧಿತ ಪ್ರದೇಶದಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಐತಿಹಾಸಿಕ ಚಾರ್'ಮಿನಾರ್'ನಲ್ಲಿ ನಡೆದಿದೆ.
ನವೀನ್ ಶಾ (30) ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಪ್ರವಾಸಿಗ. ಕುಟುಂಬಸ್ಥರೊಂದಿಗೆ ನವೀನ್ ಅವರು ಹೈದರಾಬಾದ್ ಗೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಚಾರ್'ಮಿನಾರ್ ಗೆ ತೆರಳಿದ್ದ ನವೀನ್ ಅವರು ನಿಷೇಧಿತ ಪ್ರದೇಶದಲ್ಲಿ ಸೆಲ್ಫೀ ತೆಗೆದುಕೊಳ್ಳಲು ಆರಂಭಿಸಿದ್ದರು. ಕೂಡಲೇ ನವೀನ್ ಅವರನ್ನು ಗಮನಿಸಿದ್ದ ಭದ್ರತಾ ಸಿಬ್ಬಂದಿಗಳು ಸೆಲ್ಫೀಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ನವೀನ್ ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ತೀವ್ರ ವಾಗ್ವಾದಗಳು ನಡೆದಿದೆ. ತೀವ್ರವಾಗಿ ಕೆಂಡಾಮಂಡಲವಾಗಿದ್ದ ನವೀನ್ ಅವರು ಪ್ರದೇಶದಿಂದ ಹೊರ ಬರಲು ನಿರಾಕರಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದಿರುವ ಚಾರ್'ಮಿನಾರ್ ಪೊಲೀಸರು ನವೀನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಾತುಕತೆ ಬಳಿಕ ನವೀನ್ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
2016ರ ಫೆಬ್ರವರಿ ತಿಂಗಳಿನಲ್ಲಿ ಸೆಲ್ಫೀಯಿಂದಾಗಿ ಚಾರ್ಮಿನಾರ್ ಬಳಿ ಅಪಘಾತಗಳ ಸಂಖ್ಯೆಗಳು ಹೆಚ್ಚಾದ ಕಾರಣ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಪ್ರವಾಸ ಇಲಾಖೆಗಳಿಗೆ ಸೂಚನೆಯೊಂದನ್ನು ನೀಡಿತ್ತು. ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಫೀ ನಿಷೇಧಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಚಾರ್'ಮಿನಾರ್ ನ ಕೆಲ ಪ್ರದೇಶಗಳಲ್ಲಿ ಸೆಲ್ಫೀಗೆ ನಿಷೇಧ ಹೇರಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos