ಲಖನೌ: ಉತ್ತರ ಪ್ರದೇಶದಲ್ಲಿ 14 ವರ್ಷಗಳ ಬಿಜೆಪಿ ವನವಾಸ ಈ ಬಾರಿ ಅಂತ್ಯವಾಗಲಿದೆ. ಬಿಜೆಪಿ ವನವಾಸ ಮಾತ್ರವಲ್ಲ. ಅಭಿವೃದ್ಧಿಯ ವನವಾಸಕ್ಕೂ ಮುಕ್ತಿ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಇಂದು ಲಖನೌನಲ್ಲಿ ಪರಿವರ್ತನ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಹಿಂದುಸ್ಥಾನದ ಭಾಗ್ಯವನ್ನು ಬದಲಾಯಿಸಲು ನಾವು ಮೊದಲು ಉತ್ತರ ಪ್ರದೇಶದ ಭಾಗ್ಯವನ್ನು ಬದಲಾಯಿಸಬೇಕು. ಆದರೆ ಉತ್ತರ ಪ್ರದೇಶ 14 ವರ್ಷಗಳಿಂದ ಅಭಿವೃದ್ಧಿಯ ವನವಾಸವನ್ನು ಅನುಭವಿಸುತ್ತಿದೆ. ಕೆಲವರು ಬಿಜೆಪಿ 14 ವರ್ಷಗಳ ವನವಾಸ ಅಂತ್ಯಗೊಳ್ಳುತ್ತದೆ ಎನ್ನುತ್ತಿದ್ದಾರೆ. ಆದರೆ ಇದು ಬಿಜೆಪಿಯ ವನವಾಸವಲ್ಲ, ಉತ್ತರ ಪ್ರದೇಶದ ಅಭಿವೃದ್ಧಿಯ ವನವಾಸ ಎಂದರು. ಅಲ್ಲದೆ ರಾಜ್ಯದ ಅಭಿವೃದ್ಧಿಗಾಗಿ ಜಾತಿ, ಧರ್ಮ ಬದಿಗಿಟ್ಟು ಈ ಬಾರಿ ಬಿಜೆಪಿಗೆ ಮತ ನೀಡುವಂತೆ ಕರೆ ನೀಡಿದರು.
ಎಸ್ಪಿ ಮತ್ತು ಬಿಎಸ್ಪಿ ಎಂದಾದರೂ ಒಂದಾದದ್ದನ್ನು ನೀವು ಕಂಡಿದ್ದೀರಾ? ಇಷ್ಟೊಂದು ವರ್ಷಗಳಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇವರಿಬ್ಬರೂ ಒಂದಾಗಿದ್ದಾರೆ, ಮೋದಿಯನ್ನು ಬದಲಾಯಿಸಿ ಎಂದು ಹೇಳುತ್ತಿದ್ದಾರೆ. ನಾನು ಭ್ರಷ್ಟಾಚಾರವನ್ನು ತೊಲಗಿಸಿ ಎಂದು ಹೇಳುತ್ತಿದ್ದೇನೆ, ಇವರು ಮೋದಿಯನ್ನು ತೊಲಗಿಸಿ ಎಂದು ಹೇಳುತ್ತಿದ್ದಾರೆ. ನಾನು ಕಾಳಧನವನ್ನು ತೊಲಗಿಸಿ ಎಂದು ಹೇಳುತ್ತಿದ್ದೇನೆ, ಇವರು ಮೋದಿಯನ್ನು ತೊಲಗಿಸಿ ಎಂದು ಹೇಳುತ್ತಿದ್ದಾರೆ. ಯಾವುದನ್ನು ತೊಲಗಿಸಬೇಕು ಎಂದು ನೀವೇ ನಿರ್ಧರಿಸಿ ಎಂದು ಪ್ರಧಾನಿ ಜನತೆಗೆ ಹೇಳಿದರು.
ಇದೇ ವೇಳೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ. ಕೇಂದ್ರ ಸರ್ಕಾರ ಭತ್ತ ಖರೀದಿಗಾಗಿ ಎಲ್ಲಾ ರೀತಿಯ ಸಹಾಯ ನೀಡಿದೆ. ಆದರೂ ಉತ್ತರ ಪ್ರದೇಶ ಸರ್ಕಾರ ರೈತರಿಂದ ಭತ್ತ ಖರೀದಿಸಿಲ್ಲ ಎಂದು ಆರೋಪಿಸಿದರು.
ಮೋದಿ ಅವರಿಗಿಂತ ಮೊದಲ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷಾಧ್ಯಕ್ಷ ಅಮಿತ್ ಷಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos