ರಾಮೇಶ್ವರಂ: ಭಾನುವಾರ ಬೆಳಗ್ಗೆ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ 10 ಮಂದಿ ಭಾರತೀಯ ಮೀನುಗಾರರನ್ನು ಪಾಲ್ಕ್ ಸ್ಟ್ರೈಟ್ ಬಳಿ ಬಂಧಿಸಿರುವ ಶ್ರೀಲಂಕಾ ನೌಕಾಪಡೆ ಎರಡು ದೋಣಿಗಳನ್ನು ವಶಪಡಿಸಿಕೊಂಡಿದೆ.
ನಿನ್ನೆಯಷ್ಟೇ ಶ್ರೀಲಂಕಾ ನೌಕಾಪಡೆ ಪಾಲ್ಕ್ ಸ್ಟ್ರೈಟ್ ನ ನೆಡುಂತೀವು ಎಂಬಲ್ಲಿ 8 ಮಂದಿ ಭಾರತೀಯ ಮೀನುಗಾರರನ್ನು ಹಿಡಿದು ಒಂದು ದೋಣಿಯನ್ನು ವಶಪಡಿಸಿಕೊಂಡಿತ್ತು.
ಮೀನುಗಾರರು ಪ್ರಸ್ತುತ ಕಸ್ಟಡಿಯಲ್ಲಿದ್ದು, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಶ್ರೀಲಂಕಾದ ಮೀನುಗಾರಿಕಾ ಸಚಿವ ಮಹಿಂದ ಅಮರವೀರ ಕೊಲಂಬೊದಲ್ಲಿ ಮಾತುಕತೆ ನಡೆಸಿ ಮೀನುಗಾರರ ಬಿಡುಗಡೆ ಬಗ್ಗೆ ಘೋಷಿಸಿದರು.
ಡಿಸೆಂಬರ್ 31ರಂದು ದೆಹಲಿಯಲ್ಲಿ ನಡೆದ ಮೀನುಗಾರಿಕೆ ಇಲಾಖೆಗಳ ಜಂಟಿ ಕಾರ್ಯಕಾರಿ ಗುಂಪಿನ ಸಭೆಯ ನಂತರ ಮೊನ್ನೆ ಸೋಮವಾರ ಈ ಮಾತುಕತೆ ನಡೆಯಿತು.ಭಾರತದ ದಕ್ಷಿಣದ ರಾಜ್ಯಗಳು ಮೀನುಗಾರರನ್ನು ಶ್ರೀಲಂಕಾ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರೆ, ಭಾರತೀಯ ಮೀನುಗಾರರು ಬಳಸುತ್ತಿರುವ ಬಲೆಗಳಿಂದ ಸಾಗರ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಶ್ರೀಲಂಕಾ ಪ್ರತಿಪಾದಿಸುತ್ತಿದೆ.