ದೇಶ

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬೆಂಬಲಿಸಿ ಪ್ರತಿಭಟನೆ, 240 ಮಂದಿ ಬಂಧನ

Lingaraj Badiger
ಮದುರೈ: ಪೊಂಗಲ್‌ ಹಬ್ಬದ ಬಳಿಕ ಜಲ್ಲಿಕಟ್ಟು ಸ್ಪರ್ಧೆ ಬೆಂಬಲಿಸಿ ತಮಿಳುನಾಡಿನ ಅಲಂಗನಲ್ಲೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ 240 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೂರಾರು ಯುವಕರು ಸೋಮವಾರ ರಾತ್ರಿಯೂ ಪ್ರತಿಭಟನೆ ಮುಂದುವರಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ, 240 ಮಂದಿಯನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಪ್ರತಿಭಟನಾಕಾರರ ಬಂಧನ ವಿರೋಧಿಸಿ ಮದುರೈನ ಹಲವು ಪ್ರತಿಭಟನೆಗಳು ತೀವ್ರಗೊಂಡಿದ್ದು, ಈ ಕೂಡಲೇ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡದ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಪ್ರತಿಭಟನಾನಿರತರು ಘೋಷಣೆ ಕೂಗಿದ್ದು, ಜನರನ್ನು ಚದುರಿಸುತ್ತಿದ್ದ ಪೊಲೀಸರಿಗೂ ವಿರೋಧ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿ ಜಲ್ಲಿಕಟ್ಟು ಆಯೋಜಿಸುವ ಉತ್ಸಾಹ ಕಡಿಮೆಯಾಗಿಲ್ಲ. ಅಲಂಗನಲ್ಲೂರು ಹಾಗೂ ಮದುರೈನಲ್ಲಿ ಸ್ಪರ್ಧೆ ಆಯೋಜಿಸಲು ಸಿದ್ಧತೆ ನಡೆದಿತ್ತು. ಜತೆಗೆ, ಸ್ಪರ್ಧೆ ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಗ್ರಾಮದಲ್ಲಿ ಸೋಮವಾರ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
SCROLL FOR NEXT