ನಮ್ಮ ಏಳಿಗೆಯನ್ನು ಅಪಾಯ ಎಂಬಂತೆ ನೋಡಬೇಡಿ: ಚೀನಾಗೆ ಭಾರತ
ನವದೆಹಲಿ: ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ತನ್ನ ಮಹತ್ವಾಕಾಂಕ್ಷೆಯ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಮುಂದುವರೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಚೀನಾ ನಮ್ಮ ಪ್ರಾದೇಶಿಕ ಹಕ್ಕನ್ನು ಗೌರವಿಸಬೇಕು ಎಂದು ತಾಕೀತು ಮಾಡಿದೆ.
ಖಂಡಾಂತರ ವ್ಯಾಪಾರ ಹಾಗೂ ಆರ್ಥಿಕ ಸಾಮರಸ್ಯಕ್ಕಾಗಿ ಆಯೋಜಿಸುವ 'ರೈಸಿನಾ ಡೈಲಾಗ್’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್, ಚೀನಾ ನಮ್ಮ ಏಳಿಗೆಯನ್ನು ಅಪಾಯ ಎಂಬಂತೆ ನೋಡಬಾರದು ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆಯೂ ಮಾತನಾಡಿರುವ ಜೈಶಂಕರ್, ಚೀನಾ ತನ್ನ ಪ್ರಾದೇಶಿಕ ಹಕ್ಕುಗಳ ಬಗ್ಗೆ ಬಹಳ ಸಂವೇದನೆಯಿಂದ ನಡೆದುಕೊಳ್ಳುತ್ತದೆ. ಬೇರೆ ರಾಷ್ಟ್ರಗಳ ಪ್ರಾದೇಶಿಕ ಹಕ್ಕುಗಳಿಗೂ ಅದೇ ಸಂವೇದನೆಯಿಂದ ಸ್ಪಂದಿಸಬೇಕೆಂಬ ಅಪೇಕ್ಷೆ ಇದೆ ಎಂದು ಹೇಳಿದ್ದಾರೆ.
ಭಾರತ-ಚೀನಾ ಎರಡೂ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಸ್ಪಷ್ಟ ಸಂದೇಶ ರವಾನೆ ಮಾಡಿರುವ ಬೆನ್ನಲ್ಲೇ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ನಮ್ಮ ಪ್ರಾದೇಶಿಕ ಹಕ್ಕನ್ನು ನೀವೂ ಗೌರವಿಸಬೇಕೆಂದು ಚೀನಾಗೆ ಹೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನದ ಬಗ್ಗೆಯೂ ಜೈಶಂಕರ್ ಮಾತನಾಡಿದ್ದು, ಕೇವಲ ಒಂದು ರಾಷ್ಟ್ರದಿಂದಾಗಿ ಸಾರ್ಕ್ ಸಂಘಟನೆ ನಿಷ್ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದು, ಭಯೋತ್ಪಾದನೆ ಅಂತಾರಾಷ್ಟ್ರೀಯ ಭದ್ರತೆಗೆ ಮಾರಕವಾಗಿದೆ. ಉಗ್ರವಾದದ ವಿರುದ್ಧ ಹೋರಾಡಬೇಕಾದರೆ ವಿಶ್ವಸಂಸ್ಥೆ ಸುಧಾರಣೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಅಮೆರಿಕ-ರಷ್ಯಾ ಬಾಂಧವ್ಯ ಉತ್ತಮಗೊಳ್ಳಲಿದ್ದು, ಪ್ರಮುಖ ಬದಲಾವಣೆಗಳಾಗಲಿವೆ ಇದರಿಂದ ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗುವುದಿಲ್ಲ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos