ದೇಶ

ದಲಿತ ಯುವಕನಿಗೆ ಥಳಿತ ಪ್ರಕರಣಕ್ಕೆ ಹೊಸ ತಿರುವು: ಮಗಳಿಗೆ ಕಿರುಕುಳ ನೀಡುತ್ತಿದ್ದನೆಂದು ತಾಯಿ ಆರೋಪ

Manjula VN

ತುಮಕೂರು: ಗುಬ್ಬಿಯಲ್ಲಿ ನಡೆದಿದೆ ಎನ್ನಲಾದ ದಲಿತ ಯುವಕನ ಥಳಿತ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಮಗಳಿಗೆ ಯುವಕ ಕಿರುಕುಳ ನೀಡಿದ್ದ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

ಮನೆಯಿಂದ ಶಾಲೆಗೆ ಹೋಗುತ್ತಿದ್ದ ವೇಳೆ ಅಭಿಷೇಕ್ ಮಗಳಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿದ್ದ. ನಂತರ ಶಾಲೆಯಿಂದ ಮನೆಗೆ ಬಂದ ಕೂಡಲೇ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದಾದ ಬಳಿಕ ಸಾಕಷ್ಟು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಆತ ಪ್ರತೀನಿತ್ಯ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ. ಮಂಜುನಾಥ್ ಅವರು, ಪ್ರಸ್ತುತ ಪ್ರಕರಣ ಸಂಬಂಧ ತನಿಖೆಗೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಯುವಕನ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಈವರೆಗೂ ಪ್ರಕರಣ ಸಂಬಂಧ ಬಾಲಕಿಯ ತಂದೆ ಸೇರಿ ಐವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ದಲಿತ ಯುವಕನೊಬ್ಬನನ್ನು ಅಪರಿಸಿದ್ದ ಗುಂಪೊಂದು ಗುಬ್ಬಿಯಲ್ಲಿರುವ ತೋಟದ ಮನೆಯಲ್ಲಿ ಆತನನ್ನು ಕೂಡಿ ಹಾಕಿ, ಬೆತ್ತಲೆಗೊಳಿಸಿ ಚಪ್ಪಲಿ ಹಾರವನ್ನು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಘಟನೆಯ ವಿಡಿಯೋ ವಾಟ್ಸ್ಆ್ಯಪ್ ಗಳಲ್ಲಿ ಹರಿದಾಡತೊಡಗಿತ್ತು. ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದಿದ್ದವು. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದವು.

SCROLL FOR NEXT