ಬೆಂಗಳೂರು: ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರೂಪ್ ಕುಮಾರ್ ದತ್ತಾ ಅವರು ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರಿಂದ ಬ್ಯಾಟನ್ ಸ್ವೀಕರಿಸಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂಎನ್ ರೆಡ್ಡಿ ಕಿಶೋರ್ ಚಂದ್ರ, ನೀಲಮಣಿ ಎಂ ರಾಜು ಅವರು ಉಪಸ್ಥಿತರಿದ್ದರು.
ಜನವರಿ 31ರಂದು ಹಾಲಿ ಡಿಜಿ-ಐಜಿಪಿ ಓಂ ಪ್ರಕಾಶ್ ಅವರು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಆರ್ ಕೆ ದತ್ತಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಪೊಲೀಸ್ ಮಹಾ ನಿರ್ದೇಶಕ ಹುದ್ದೆಗೆ ಸಾಕಷ್ಟು ಪೈಪೋಟಿ ಇತ್ತಾದರೂ ಯಾವುದೇ ರೀತಿಯ ವಿವಾದಗಳಿಗೆ ಎಡೆ ಮಾಡಿಕೊಡಬಾರದು ಎಂದು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಸೇವಾ ಹಿರಿತನದ ಆಧಾರದ ಮೇಲೆ ಆರ್ ಕೆ ದತ್ತಾ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹುದ್ದೆಗೆ ನೇಮಕ ಮಾಡಿದ್ದರು.
1981ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆರ್ ಕೆ ದತ್ತಾ ಅವರು ಪ್ರಸ್ತುತ ಕೇಂದ್ರ ಸೇವೆಯಲ್ಲಿದ್ದು, ವಿಶೇಷ ಕಾರ್ಯದರ್ಶಿ(ಆಂತರಿಕ ಭದ್ರತೆ)ಯಾಗಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಅವರನ್ನು ಕೇಂದ್ರ ಸೇವೆಯಿಂದ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರಬರೆದಿದೆ. ಈ ಹಿಂದೆ ಸಿಬಿಐ ನಿರ್ದೇಶಕರ ಹುದ್ದೆಗೂ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಆರ್ ಕೆ ದತ್ತಾ ಅವರ ಹೆಸರು ಕೇಳಿ ಬಂದಿತ್ತು.