ನವದೆಹಲಿ: ಹಿಮಾಚಲ ಪ್ರದೇಶದ ಹಿರಿಯ ನಾಗರಿಕರೊಬ್ಬರು 40ರು.ಗಳಿಗಾಗಿ ಬರೊಬ್ಬರಿ 3 ವರ್ಷ ಕಾನೂನು ಹೋರಾಟ ನಡೆಸಿ ಕೊನೆಗೂ ಅದರಲ್ಲಿ ಜಯಸಾಧಿಸಿರುವ ಅಪರೂಪದ ಘಟನೆ ದೆಹಲಿಯಲ್ಲಿ ನಡೆದಿದೆ.
ಹಿಮಾಚಲ ಪ್ರದೇಶ ಮೂಲಕ 70 ವರ್ಷ ವಯಸ್ಸಿನ ಲೇಖರಾಜ್ ಎಂಬುವವರು ಈ ಹಿಂದೆ ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮನೆಯೊಂದನ್ನು ಖರೀದಿಸಿದ್ದರು. 2014ರಲ್ಲಿ ನಿರ್ವಹಣೆ ಶುಲ್ಕವನ್ನು ಪಾವತಿಸದ್ದಕ್ಕಾಗಿ ಪ್ರಾಧಿಕಾರವು ಲೇಖರಾಜ್ ಅವರಿಗೆ 848 ರು.ಗಳ ದಂಡವನ್ನು ವಿಧಿಸಿತ್ತು. ದಂಡ ಪಾವತಿಸದಿದ್ದರೆ ನೀರು ಪೂರೈಕೆ ಮತ್ತು ಒಳಚರಂಡಿ ಸಂಪರ್ಕದಂತಹ ಮೂಲಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಅದು ಲೇಖರಾಜ್ ಗೆ ಬೆದರಿಕೆಯೊಡ್ಡಿತ್ತು.
ನಿಯಮದಂತೆ ಲೇಖರಾಜ್ಗೆ 808 ರು.ಗಳ ದಂಡವನ್ನು ವಿಧಿಸಬೇಕಿದ್ದರೂ ಪ್ರಾಧಿಕಾರವು ಹೆಚ್ಚುವರಿಯಾಗಿ 40 ರು.ಗಳನ್ನು ವಸೂಲು ಮಾಡಿತ್ತು. ಇದನ್ನು ಪ್ರಶ್ನಿಸಿ ಲೇಖರಾಜ್ ಉನಾದಲ್ಲಿರುವ ಜಿಲ್ಲಾ ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದರು. ವಿಚಾರಣೆ ಬಳಿಕ 2016ರಲ್ಲಿ ಅವರ ದೂರು ತಿರಸ್ಕೃತಗೊಂಡಿತ್ತು. ಇದರ ವಿರುದ್ಧ ಅವರು ರಾಜ್ಯ ಗ್ರಾಹಕ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದರಾದರೂ ಅಲ್ಲಿಯೂ ಅವರಿಗೆ ಸೋಲುಂಟಾಗಿತ್ತು. ಇಷ್ಟಾದರೂ ಛಲ ಬಿಡದ ಲೇಖರಾಜ್ ದೆಹಲಿಯ ಎನ್ಸಿಡಿಆರ್ಸಿಯ ಮೊರೆ ಹೋಗಿದ್ದರು.
ಇದೀಗ ಕೊನೆಗೂ ಲೇಖರಾಜ್ ಅವರ ಪರವಾಗಿ ಎನ್ಸಿಡಿಆರ್ಸಿ ತೀರ್ಪು ನೀಡಿದ್ದು, 40 ರೂ.ಗಳನ್ನು ಅವರಿಗೆ ಮರಳಿಸುವಂತೆ ಮತ್ತು ಪರಿಹಾರವಾಗಿ 5,000 ರೂ.ಗಳನ್ನು ನಾಲ್ಕು ವಾರಗಳಲ್ಲಿ ಪಾವತಿಸುವಂತೆ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಇನ್ನು ವಿಚಾರಣೆ ಸಂದರ್ಭದಲ್ಲಿ ಪ್ರಾಧಿಕಾರ ಲೇಖರಾಜ್ಗೆ ತಾನು 40 ರು.ಅಧಿಕ ದಂಡ ವಿಧಿಸಿದ್ದನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾದ್ದರಿಂದ ಎನ್ಸಿಡಿಆರ್ಸಿ ಲೇಖರಾಜ್ ಅವರ ಪರ ತೀರ್ಪು ನೀಡಿದೆ ಎಂದು ತಿಳಿದುಬಂದಿದೆ.
ವಿಚಾರಣೆಗಾಗಿ ದೆಹಲಿಗೆ ತೆರಳಲು ನಿತ್ಯ 400 ರು. ವ್ಯಯ
ಇನ್ನು ಅರ್ಜಿದಾರ ಲೇಖರಾಜ್ ತನ್ನ ಅರ್ಜಿಯ ವಿಚಾರಣೆಗಾಗಿ ನಿತ್ಯ ದೆಹಲಿಗೆ ತೆರಳಬೇಕಿರುತ್ತಿತ್ತು. ಇದಕ್ಕಾಗಿಯೇ ಇವರು ಸುಮಾರು 400 ರು.ಗಳನ್ನು ವ್ಯಯಿಸಬೇಕಿತ್ತು. ಈ ವೆಚ್ಚವನ್ನು ಗಮನದಲ್ಲಿಟ್ಟುಕೊಂಡರೆ ಪ್ರಾಧಿಕಾರ ವಿಧಿಸಿದ್ದ 40ರು ಹೆಚ್ಚುವರಿ ಶುಲ್ಕ ಏನೇನೂ ಅಲ್ಲ. ಆದರೂ ಪ್ರಾಧಿಕಾರದ ಪ್ರಮಾದ ಮತ್ತು ನಿರ್ಲಕ್ಷ್ಯವನ್ನು ಬಯಲಿಗೆಳೆಯಲು ನಿರ್ಧರಿಸಿದ ಲೇಖರಾಜ್ ನ್ಯಾಯ ಪಡೆಯಲೇಬೇಕೆಂಬ ಛಲದೊಂದಿಗೆ ಖರ್ಚಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಅವರ ಪರಿಶ್ರಮಕ್ಕೆ ಫಲ ಸಿಕ್ಕಿದ್ದು ಪ್ರಕರಣ ಅವರ ಪರವಾಗಿಯೇ ಆಗಿದೆ.
ಆ ಮೂಲಕ ಸರ್ಕಾರಿ ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರವಾಗಿದೆ.