ಬೀಜಿಂಗ್: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು 1890ರಲ್ಲಿ ಬ್ರಿಟಿಷ್ ಇಂಡಿಯಾ, ಚೀನಾ ಹಾಕಿದ ಟಿಬೆಟ್-ಸಿಕ್ಕಿಂ ಒಪ್ಪಂದವನ್ನು ಪೂರ್ಣ ಅನುಮೋದಿಸಿರಲಿಲ್ಲ ಎಂದು ತಿಳಿದುಬಂದಿದೆ.
ಚೀನಾ ಪ್ರಧಾನಿಗೆ ಭಾರತದ ಮೊದಲ ಪ್ರಧಾನಿ ಈ ಕುರಿತು ಬರೆದ ಪತ್ರಗಳಲ್ಲಿ ಈ ಅಂಶ ವ್ಯಕ್ತವಾಗಿದೆ. ಭಾರತ-ಭೂತಾನ್-ಚೀನಾ ಗಡಿಗೆ ಹೊಂದಿರುವ ಸಿಕ್ಕಿಂ ವಲಯದ ಒಂದು ಭಾಗ ಈಗ ಯಾರಿಗೆ ಸೇರಿದ್ದು ಎಂಬ ಕುರಿತಂತೆ ಚೀನಾ-ಭಾರತ ತೀವ್ರ ಸಂಘರ್ಷ ನಡೆಸುತ್ತಿದ್ದು, ಈ ವಿವಾದ ನೆಹರು ಪ್ರಧಾನಿಯಾದಾಗಲೂ ಇತ್ತು ಎಂದು ಕೆಲವು ಪತ್ರಗಳಿಂದ ಬಹಿರಂಗಗೊಂಡಿದೆ.
1959 ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಮಾವೋ ಝೆಡಾಂಗ್ ನಂತರದ ನಂ.2 ನಾಯಕನಾಗಿದ್ದ ಪ್ರಧಾನಿ ಝೌ ಎನ್ಸಾಯಿ ಅವರಿಗೆ ಜವಾಹರ್ ಲಾಲ್ ನೆಹರು ಅವರು ಪತ್ರ ಬರೆದಿದ್ದರು.
ಇದರಲ್ಲಿ ಭಾರತ-ಭೂತಾನ್-ಚೀನಾ ಗಡಿಯಲ್ಲಿ ಗುರುಸುವಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದುಬರುತ್ತದೆ. ಇಂದು ಇದೇ ಭೂ ಪ್ರದೇಶ ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ.
ನೆಹರು ಅವರು 1890ರ ಒಪ್ಪಂದವನ್ನು ಪತ್ರದಲ್ಲಿ ಅನುಮೋದಿಸಿದ್ದರು. ಬಳಿಕ 1895ರಲ್ಲಿ ಗಡಿ ಗುರುತಿಸುವಿಕೆ ನಡೆದಿತ್ತು ಎಂದು ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್ ಈ ಹಿಂದೆ ಹೇಳಿಕೆ ನೀಡಿದ್ದರು. ನೆಹರು ಅವರು ಬರೆದಿರುವ ಪತ್ರ ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ ಚೀನಾ ವಕ್ತಾರ ನೀಡಿರುವ ಹೇಳಿಕೆ ಹುಸಿ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ.
ಸಿಕ್ಕಿಂ ಮತ್ತು ಟಿಬೆಟ್ ಗಳಿಗೆ ಸಂಬಂಧಿಸಿ ಗ್ರೇಟ್ ಬ್ರಿಟನ್ ಮತ್ತು ಚೀನಾ ದೇಶಗಳ ನಡುವೆ ಏರ್ಪಟ್ಟ ಒಪ್ಪಂದಕ್ಕೆ 1890ರಲ್ಲಿ ಅಂದಿನ ಕೋಲ್ಕತಾದಲ್ಲಿ ಅಂದಿನ ವಸಾಹತುಶಾಹಿ ಬ್ರಿಟನ್ ಮತ್ತು ಚೀನಾದ ಕಿಂಗ್ ರಾಜವಂಶ ಸಹಿ ಹಾಕಿತ್ತು.
ಚೀನಾ-ಸಿಕ್ಕಿಂ ಗಡಿಯಲ್ಲಿ ಯಾವುದೇ ವಿವಾದವಿಲ್ಲ ಎಂಬುದಾಗಿ 1859 ಸೆಪ್ಟೆಂಬರ್ 26 ರಂದು ಝೂ ಅವರಿಗೆ ಬರೆದ ಪತ್ರದಲ್ಲಿ ನೆಹರು ಖಚಿತಪಡಿಸಿದ್ದಾರೆಂದು ಮತ್ತೊಂದು ಪತ್ರವನ್ನು ಉಲ್ಲೇಖಿಸಿ ಚೀನಾ ವಕ್ತಾರ ಹೇಳಿಕೆ ನೀಡಿದ್ದರು. ಆದರೆ, ವಾಸ್ತವವಾಗಿ ಸೆಪ್ಟೆಂಬರ್ 26ರಂದು ನೆಹರು ಬರೆದ ಪತ್ರದಲ್ಲಿ ಚೀನಾ ಈಗ ಜಗತ್ತಿಗೆ ಹೇಳುತ್ತಿರುವುದಕ್ಕಿಂತ ಹೆಚ್ಚಿನ ವಿಷಯಗಳಿವೆ. ಉತ್ತರ ಸಿಕ್ಕಿಂಗೆ ಸಂಬಂಧಪಟ್ಟಂತೆ ಮಾತ್ರ 1890ರ ಒಪ್ಪಂದಕ್ಕೆ ಭಾರತ ಬದ್ಧವಾಗಿದೆ ಎಂದು ಆ ಪತ್ರದಲ್ಲಿ ನೆಹರು ಹೇಳಿದ್ದರು.