ನವದೆಹಲಿ: ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ರಾಜತಾಂತ್ರಿಕತೆಯ ಮೂಲಕ ಬಗೆಹರಿಯಲಿದ್ದು, ಚೀನಾ ಸೈನಿಕರು ಮೊದಲು ವಿವಾದಿತ ಗಡಿ ಪ್ರದೇಶ ತೊರೆದು ತಾವಿದ್ದ ಪ್ರದೇಶಗಳಿಗೆ ತೆರಳಬೇಕೆಂದು ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಸುಭಾಷ್ ಭಮ್ರೆ ಬುಧವಾರ ಹೇಳಿದ್ದಾರೆ.
ಭಾರತ ಹಾಗೂ ಚೀನಾ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಉಭಯ ದೇಶಗಳ ನಡುವೆ ಎದುರಾಗಿರುವ ಸಮಸ್ಯೆಯನ್ನು ರಾಜತಾಂತ್ರಿಕ ಹಂತದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ಮೊದಲು ಚೀನಾ ಸೇನಾ ಪಡೆ ತಾವಿದ್ದ ಸ್ಥಳಗಳಿಗೆ ತೆರಳಬೇಕು. ಚೀನಾ ಭೂತಾನ್ ಭೂಭಾಗವನ್ನು ಸಮೀಸುತ್ತಿದೆ. ಚೀನಾ ಮತ್ತೊಂದು ಹೆಜ್ಜೆಯನ್ನು ಮುಂದೆ ಇಡಬಾರದು. ಇದು ಭದ್ರತೆಯ ಹಿತಾಸಕ್ತಿಯಾಗಿದ್ದು, ನಮ್ಮ ನಿಲುವಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದ ಚೀನಾ ಭಾರತವೇ ಪಂಚಶೀಲ ತತ್ವವನ್ನು ಉಲ್ಲಂಘಿಸಿದೆ ಎಂದು ಹೇಳಿದ್ದರು, ಸಿಕ್ಕಿಂ ಸೆಕ್ಟರ್ ನ ಚಿಕನ್ ನೆಕ್ ಸಮೀಪ ಚೀನಾ ಸೇನಾಪಡೆಗಳು ರಸ್ತೆ ನಿರ್ಮಿಸುತ್ತಿವೆ ಎಂದು ಭಾರತ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ದೂರಿದ್ದರು.