ನವದೆಹಲಿ: ಅಮರನಾಥ ಯಾತ್ರೆ ಯಾತ್ರಾರ್ಥಿಗಳ ಮೇಲಿನ ದಾಳಿಯಲ್ಲಿ ಇಬ್ಬರು ಪಾಕಿಸ್ತಾನ ಉಗ್ರರು ಸೇರಿದಂತೆ ಒಟ್ಟು ನಾಲ್ವರು ಉಗ್ರರು ಭಾಗಿಯಾಗಿದ್ದಾರೆ ಎಂದು ಗೃಹ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ದಾಳಿ ಕುರಿತಂತೆ ಮಾಹಿತಿ ನೀಡಿರುವ ಗೃಹ ಸಚಿವಾಲಯ, ಪಾಕಿಸ್ತಾನ ಮೂಲದ ಹಾಗೂ ನಿಷೇಧಿತ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಇಸ್ಮಾಯಿಲ್ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದಾನೆಂದು ಹೇಳಿದೆ.
ದಾಳಿ ಬಳಿಕ ಪರಾರಿಯಾಗಲು ಉಗ್ರರು ಎರಡು ದ್ವಿಚಕ್ರ ವಾಹನಗಳನ್ನು ಬಳಸಿದ್ದಾರೆಂದು ತಿಳಿಸಿದೆ.
ಎರಡು ವರ್ಷಗಳ ಹಿಂದೆಯೇ ಕಾಶ್ಮೀರ ಗಡಿ ನಿಯಂತ್ರಣ ರೇಖೆಯನ್ನು ದಾಳಿದ್ದ ಇಸ್ಮಾಯಿಲ್ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದ. ಅಂದಿನಿಂದ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜು.1 ರಂದು ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಎಲ್ಇಟಿ ಕಮಾಂಡರ್ ಬಷೀರ್ ಲಷ್ಕರಿಯನ್ನು ಹತ್ಯೆ ಮಾಡಿಲಾಗಿತ್ತು. ಉತ್ತರಪ್ರದೇಶದ ನಿವಾಸಿಯಾಗಿರುವ ಸಂದೀಪ್ ಶರ್ಮಾ ಎಂಬಾತ ಬಷೀರ್ ಗೆ ನಿಕವರ್ತಿಯಾಗಿದ್ದ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಸಂದೀಪ್ ಭಾಗಿಯಾದಿದ್ದ. ಎನ್ ಕೌಂಟರ್ ವೇಳೆ ಬಷೀರ್ ಅಡಗಿದ್ದ ಮನೆಯಲ್ಲಿಯೇ ಸಂದೀಪ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಸಂದೀಪ್ ಬಂಧನದ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿಯೇ ಉಗ್ರರು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿಸಿದ್ದಾರೆ.
ದಾಳಿಯಲ್ಲಿ ಯಾತ್ರಾರ್ಥಿಗಳ ಸಾವು ಹಾಗೂ ಗಾಯ ನಿಜಕ್ಕೂ ದುರಾದೃಷ್ಟಕರ ಎಂದು ಗೃಹ ಸಚಿವಾಲಯ ಹೇಳಿದೆ.
ಅಮರನಾಥ ಯಾತ್ರಿಕರ ಮೇಲಿನ ಉಗ್ರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆಂದೂ ಕಂಡರಿಯದ ಭಾರೀ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನೂ ತೀವ್ರಗೊಳಿಸಲಾಗಿದೆ.
ಪ್ರಧಾನಮಂತ್ರಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್, ಗೃಹ ಖಾತೆ ಸಹಾಯಕ ಸಚಿವ ಹನ್ಸ್ ರಾಜ್ ಅಹಿರ್ ನೇತೃತ್ವದ ಕೇಂದ್ರದ ಸಚಿವರ ತಂಡವು ಕಾಶ್ಮೀರಕ್ಕೆ ಭೇಟಿ ನೀಡಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ರಾಜ್ಯಪಾಲ ಎನ್.ಎನ್. ವೋರಾ ಅವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆಗಳು ಕಂಡು ಬಂದಿವೆ.
ಯಾತ್ರಾರ್ಥಿಗಳ ಸುರಕ್ಷತೆಯೂ ಸೇರಿದಂತೆ ಕಣಿವೆಯಾದ್ಯಂತ ಉಗ್ರರ ದಾಳಿಗಳು ನಡೆಯದಂತೆ ಕಟ್ಟೆಚ್ಚರ ಘೋಷಿಸಲಾಗಿದೆ. ಅಲ್ಲದೆ, ಯಾವ ಆಲೋಚನೆಯನ್ನೂ ಮಾಡದಂತೆಯೇ ಉಗ್ರರು ಕಂಡ ಕೂಡಲೇ ಹೊಡೆದುರುಳಿಸುವಂತೆಯೂ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos