ದೇಶ

ಅಮರನಾಥ ಯಾತ್ರಾರ್ಥಿಗಳ ಭದ್ರತೆ: ಅಜಿತ್ ದೋವಲ್-ಬಿಪಿನ್ ರಾವತ್ ಭೇಟಿ

Srinivasamurthy VN

ನವದೆಹಲಿ: ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಭದ್ರತೆ ಕುರಿತಂತೆ ಚರ್ಚಿಸಲು ರಾಷ್ಟ್ರೀಯ ಭದ್ರತಾ  ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಮಹತ್ವದ ನಡೆಸಿದ್ದಾರೆ.

ಅಮರನಾಥ ಯಾತ್ರೆ ಮೇಲೆ ಉಗ್ರರ ದಾಳಿ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚು ಮಾಡಲು ನಿರ್ಧರಿಸಲಾಗಿದ್ದು. ಭದ್ರತೆ ಕುರಿತಂತೆ ಅಜಿತ್ ದೋವಲ್  ಅವರೊಂದಿಗೆ ಬಿಪಿನ್ ರಾವತ್ ಅವರು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ರಾವತ್ ಜೊತೆ ಚರ್ಚೆ ನಡೆಸಿರುವ ದೋವಲ್ ಅವರು, ಭದ್ರತಾ ಸಿದ್ಧತೆಗಳ ಕುರಿತಂತೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.  ಅಂತೆಯೇ ಮಾತುಕತೆ ಬಳಿಕ ಅಮರಾನಾಥ ಯಾತ್ರೆಯ ಮಾರ್ಗಗಳಲ್ಲಿ ಭದ್ರತಾ ವಾಹನಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸಂಜೆ ವೇಳೆಯಲ್ಲಿ ಯಾವುದೇ ಪ್ರವಾಸಿ ವಾಹನಗಳ ಚಾಲನೆಗೂ ಅವಕಾಶ ನೀಡದಂತೆ  ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಜುಲೈ 10ರ ರಾತ್ರಿ 8.20 ಸುಮಾರಿಗೆ ಉಗ್ರರ ಗುಂಪೊಂದು ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ ನಡೆಸಿತ್ತು. ಬ್ಯಾಟೆಂಗೂ ಹಾಗೂ  ಖಾನಾಬಾಲ್ ಗಳಲ್ಲಿ ಶಸ್ತ್ರಸಜ್ಜಿದ ಭಯೋತ್ಪಾದಕರ ಗುಂಪು ಪೊಲೀಸ್ ಬೆಂಗಾವಲು  ಪಡೆಯ ಮೇಲೆ ದಾಳಿ ನಡೆಸಿತ್ತು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಸಿಲುಕಿಕೊಂಡಿತ್ತು. ಉಗ್ರರು ಮನಸೋಯಿಚ್ಛೆ ನಡೆಸಿದ್ದ ಗುಂಡಿನ ದಾಳಿಗೆ 7 ಯಾತ್ರಿಗಳು ಸಾವನ್ನಪ್ಪಿದ್ದರು. ಅಲ್ಲದೆ, 32ಕ್ಕೂ ಹೆಚ್ಚು  ಮಂದಿ ಗಾಯಗೊಂಡಿದ್ದರು.

SCROLL FOR NEXT