ನವದೆಹಲಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನ ಮೂಲದ ಬಾಲಕನಿಗೆ ವೈದ್ಯಕೀಯ ವೀಸಾ ನೀಡಿದ ಭಾರತೀಯ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತಂದೆ ಧನ್ಯವಾದ ತಿಳಿಸಿದ್ದಾರೆ.
ಮೆಡಂ ಸುಷ್ಮಾ ಸ್ವರಾಜ್ ಅವರು ವೈದ್ಯಕೀಯ ವೀಸಾ ನೀಡಿದ್ದರಿಂದ ನನ್ನ ಮಗ ಇಂದು ಜೀವಂತವಾಗಿದ್ದಾನೆ. ಅವನ ಹೃದಯ ಸ್ವಚ್ಛಂದವಾಗಿ ಬಡಿಯುತ್ತಿದೆ. ಹೀಗಾಗಿ ಕಾಯಿಲೆಯಿಂದ ಬಳಲುತ್ತಿರುವ ಪಾಕಿಸ್ತಾನದ ಮಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಭಾರತ ತೆರದ ಬಾಗಿಲಾಗಲಿ ಎಂದು ಸುಷ್ಮಾ ಅವರಲ್ಲಿ ಮನವಿ ಮಾಡಿದ್ದಾರೆ.
ಪಾಕಿಸ್ತಾನ ಮೂಲದ ಕಮಲ್ ಸಿದ್ದಿಕಿ ಅವರ ಮಗ ನಾಲ್ಕು ತಿಂಗಳ ರೋಹನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಭಾರತದ ವೀಸಾ ನೀಡುವಂತೆ ಸುಷ್ಮಾ ಅವರಿಗೆ ಕಮಲ್ ಸಿದ್ದಿಕಿ ಮನವಿ ಮಾಡಿದ್ದರು. ಅಂತೆ ಸುಷ್ಮಾ ಅವರು ವೈದ್ಯಕೀಯ ವೀಸಾ ನೀಡಿದ್ದು ಇಂದು ರೋಹನ್ ಆರೋಗ್ಯ ಸುಧಾರಿಸಿದೆ. ಇದಕ್ಕೆ ಕಾರಣ ಸುಷ್ಮಾ ಸ್ವರಾಜ್ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ರೋಹನ್ ತಂದೆ ಹೇಳಿದ್ದಾರೆ.
ಇನ್ನು ರೋಹನ್ ಗೆ ಚಿಕಿತ್ಸೆ ನೀಡಿದ ಜೈಪೇ ಆಸ್ಪತ್ರೆಯ ವೈದ್ಯ ಡಾ. ರಾಜೇಶ್ ಶರ್ಮಾ ಅವರು ಜುಲೈ 12ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ರೋಹನ್ ನನ್ನು ಆಸ್ಪತ್ರೆಗೆ ದಾಖಲಿಸಿದರು. ರೋಹನ್ ಗೆ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಆತನ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.