ನವದೆಹಲಿ: ಸಂಸದ, ಶಾಸಕರು ಸೇರಿದಂತೆ ಯಾರೊಬ್ಬರನ್ನು ಪ್ರಯಾಣಿಸದಂತೆ ನಿಷೇಧಿಸುವ ಅಧಿಕಾರ ವಿಮಾನಯಾನ ಸಂಸ್ಥೆಗಳಿಗೆ ಎಂದು ರಾಜ್ಯಸಭಾ ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಗುರುವಾರ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗರವಾಲ್ ಏರ್ ಇಂಡಿಯಾ ಸೇರಿದಂತೆ, ಕೆಲ ವಿಮಾನಯಾನ ಸಂಸ್ಥೆಗಳು ಕೆಲ ಜನಪ್ರತಿನಿಧಿಗಳ ವಿರುದ್ಧ ನಿಷೇಧ ಹೇರಿದ್ದನ್ನು ಪ್ರಸ್ತಾಪಿಸಿದರು. ಅಲ್ಲದೆ ವಿಮಾನಯಾನ ಸಂಸ್ಥೆಗಳಿಗೆ ನಿಷೇಧಿಸುವ ಅಧಿಕಾರವಿದೆಯಾ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುರಿಯನ್ ಅವರು, ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣಿಕರಿಗೆ ಶಿಕ್ಷೆ ನೀಡುವ ಯಾವ ಅಧಿಕಾರವೂ ಇಲ್ಲ, ಸರ್ಕಾರ ಇದರತ್ತ ಗಮನ ಹರಿಸುವುದು ಒಳಿತು. ಸಂಸದರಾಗಲಿ, ಜನ ಪ್ರತಿನಿಧಿಯಾಗಲಿ ತಪ್ಪು ಮಾಡಿದರೆ ಶಿಕ್ಷಿಸಲು ಕಾನೂನಿದೆ ಎಂದು ವಿವರಿಸಿದರು.