ನವದೆಹಲಿ: ಒಂದು ಕಡೆ ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಸುದೀರ್ಘ ಸೇನಾ ಮುಖಾಮುಖೀ ನಡೆಯುತ್ತಿದ್ದರೆ ಮತ್ತೊಂದು ಕಡೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾತುಕತೆಗೆ ಯಾವುದೇ ಅಡ್ಡಿ ಇಲ್ಲ ಮತ್ತು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಮುರಿದು ಬಿದ್ದಿಲ್ಲ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವೆ ರಾಜತಾಂತ್ರಿಕ ಮಾತುಕತೆ ಮುರಿದು ಬಿದ್ದಿಲ್ಲ. ಮುಂದಿನ ವಾರ ಬೀಜಿಂಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ (ಬ್ರಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ದೇಶಗಳ ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲಾಯ್ ಅವರು ಹೇಳಿದ್ದಾರೆ.
ಇದೇ ವೇಳೆ ಡೊಕ್ಲಾಮ್ ನಿಂದ ಭಾತರ ತನ್ನ ಸೇನೆಯನ್ನು ಹಿಂಪಡೆಯುವವರೆಗೆ ಯಾವುದೇ ಮಾತುಕತೆ ಇಲ್ಲ ಎಂಬ ಚೀನಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಗ್ಲಾಯ್ ಅವರು, ಪೂರ್ವ ಷರತ್ತಿನ ಕುರಿತ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಆದರೆ ರಾಜತಾಂತ್ರಿಕ ಮಾರ್ಗಗಳನ್ನು ಬಂದ್ ಮಾಡಿಲ್ಲ. ಚೀನಾ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಅಜಿತ್ ದೋವಲ್ ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ಮಾತುಕತೆ ನಿಗದಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ ಅವರು ಜುಲೈ 27, 28ರಂದು ನಡೆಯುವ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸುವುದು ಖಚಿತ ಎಂದಿದ್ದಾರೆ.
ಭೂತಾನ್-ಭಾರತ-ಚೀನಾ ಟ್ರೈ ಜಂಕ್ಷನ್ ಪ್ರದೇಶದಲ್ಲಿರುವ ಡೊಂಕ್ಲಮ್ ನಲ್ಲಿ ಚೀನಾ ಕೈಗೊಂಡ ವಿವಾದಾತ್ಮಕ ರಸ್ತೆ ನಿರ್ಮಾಣ ಕಾರ್ಯವನ್ನು ಕಳೆದ ಮಾರ್ಚ್ 16ರಂದು ಭಾರತೀಯ ಸೇನೆ ನಿಲ್ಲಿಸಿತ್ತು. ಪರಿಣಾಮವಾಗಿ ಉಭಯ ದೇಶಗಳ ನಡುವೆ ಸೇನಾ ಮುಖಾಮುಖಿಯಾಗುವ ಮೂಲಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆ ಪರಿಸ್ಥಿತಿ ಈಗಲೂ ಮುಂದುವರಿದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos