ಕೋಲ್ಕತ್ತಾ: 2009ರಲ್ಲಿ ಕೋಲ್ಕತ್ತಾದ ಸಿಲುಗುರಿಯ ಮನೆಯಿಂದ ಹೊರಬಿದ್ದ ಜೊಯಿತಾ ಮೊಂಡಲ್ ಗೆ ಆಕೆ ದೇಶದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆಯಾಗಬಹುದು ಎಂದು ಒಮ್ಮೆ ಕೂಡ ಯೋಚಿಸಿರಲಿಲ್ಲವಂತೆ.
ಬಾಂಗ್ಲಾದೇಶದ ಗಡಿಭಾಗ ಮುಸಲ್ಮಾನರು ಹೆಚ್ಚಿರುವ ಪ್ರದೇಶವಾದ ಉತ್ತರ ದಿನಜ್ ಪುರ್ ಜಿಲ್ಲೆಯ ಇಸ್ಲಾಂಪುರ್ ನಲ್ಲಿ 2010ರಲ್ಲಿ ಜೊಯಿತಾ ಆಕಸ್ಮಿಕವಾಗಿ ಕಾಲಿಟ್ಟಗ ಅಲ್ಲಿ ಎದುರಿಸಿದ ಪ್ರತಿಕೂಲ ವಾತಾವರಣ ಅಲ್ಲಿಯೇ ಅವರನ್ನು ನೆಲೆ ನಿಲ್ಲುವಂತೆ ಮಾಡಿತು.
ಅಲ್ಲಿಂದ ಏಳು ವರ್ಷಗಳವರೆಗೆ ಅವರ ಸಂಘಟನೆಯಾದ ದಿನಜ್ ಪುರ್ ನೊಟುನ್ ಅಲೊ(ದಿನಜ್ ಪುರ್ ನ್ಯೂ ಲೈಟ್) ಆ ಪ್ರದೇಶದಲ್ಲಿ ಸುಮಾರು 2,200 ಮಂದಿ ತೃತೀಯಲಿಂಗಿಗಳನ್ನು ಒಗ್ಗೂಡಿಸುವ ಮಟ್ಟಿಗೆ ಬೆಳೆಯಿತು.
ಮೊನ್ನೆ ಜುಲೈ 8ರಂದು ಇಸ್ಲಾಂಪುರ್ ನ ಲೋಕ ಅದಾಲತ್ ನ ನ್ಯಾಯಾಧೀಶೆಯಾಗಿ ಜೊಯಿತಾ ನೇಮಕಗೊಂಡಾಗ ತೃತೀಯಲಿಂಗಿಗಳ ಸಮುದಾಯದಲ್ಲಿ ನಿಜಕ್ಕೂ ಹರ್ಷದ ವಾತಾವರಣ ಕಂಡಿತು. ಸರ್ಕಾರಿ ಮತ್ತು ಖಾಸಗಿ ರಂಗಗಳ ಹಲವು ಉದ್ಯೋಗಗಳಲ್ಲಿ ತೃತೀಯಲಿಂಗಿಗಳು ಕೆಲಸ ಮಾಡುವುದನ್ನು ಕಂಡಾಗ ತಮ್ಮ ಕಾರ್ಯ ಸಂಪೂರ್ಣ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಜೊಯಿತಾ.
ತೃತೀಯ ಲಿಂಗಿಗಳಲ್ಲಿ ಕೆಲವರು ನ್ಯಾಯಾಧೀಶರು, ಪ್ರಾಂಶುಪಾಲರಾದರೆ ಬದಲಾವಣೆ ಸಾಧ್ಯವಿಲ್ಲ. ಅವರು ಲೈಂಗಿಕ ಕಾರ್ಯಕರ್ತರಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದು ನಿಲ್ಲುವವರೆಗೆ ವೈಯಕ್ತಿಕ ಬೆಳವಣಿಗೆಗೆ ಅರ್ಥವಿಲ್ಲ. ತೃತೀಯ ಲಿಂಗಿಗಳಲ್ಲಿ ಬಹುತೇಕರು ವಿದ್ಯಾವಂತರಾಗಿರದಿದ್ದರೂ ಕೂಡ ಅವರನ್ನು ಗ್ರೂಪ್ ಡಿ ನೌಕರಿಗೆ ನೇಮಕ ಮಾಡಿಕೊಳ್ಳಬಹುದು. ಕೋಲ್ಕತ್ತಾದಿಂದ ಉತ್ತರ ದಿನಜ್ ಪುರ್ ಗೆ ತಮ್ಮ ಹಕ್ಕುಗಳ ಹೋರಾಟಕ್ಕಾಗಿ ಮಾತ್ರ ಬರಲಿಲ್ಲ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಸಮುದಾಯದವರೇ ಕಾರಣ.ಹಾಗಾಗಿ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಂಡರೆ ನಮ್ಮ ಪರಿಸ್ಥಿತಿಯೂ ಉತ್ತಮವಾಗುತ್ತದೆ. ಕೂಲಿ ಕೆಲಸ, ಪಿಯೊನ್ ಅಥವಾ ಇತರ ಗ್ರೂಪ್ ಡಿ ಕೆಲಸಗಳು ಕೂಡ ಗೌರವಯುತವಾದದ್ದು ಎಂದು ನಂಬುತ್ತೇನೆ ಎನ್ನುತ್ತಾರೆ.
ಮತದಾನದ ಗುರುತು ಪತ್ರ ಸಿಕ್ಕಿ ಮೊದಲ ಬಾರಿಗೆ 2016ರಲ್ಲಿ ಜೊಯಿತಾ ಮತ ಚಲಾಯಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos