ದೇಶ

ರೈಲಿನಲ್ಲಿ ಕಳಪೆ ಆಹಾರದ ಕುರಿತು ಸಿಎಜಿ ವರದಿ: ಮನೆಯಿಂದಲೇ ಆಹಾರ ತನ್ನಿ ಎಂದ ರೈಲ್ವೆ ಇಲಾಖೆ

Srinivasamurthy VN

ನವದೆಹಲಿ: ರೈಲು ಪ್ರಯಾಣಿಕರಿಗೆ ರೈಲುಗಳಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವ ಕುರತು ವ್ಯಾಪಕ ದೂರುಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದಲೇ ಆಹಾರ ತೆಗೆದುಕೊಂಡು ಬರುವಂತೆ ಪ್ರಯಾಣಿಕರಿಗೆ  ರೈಲ್ವೆ ಇಲಾಖೆ ಸಲಹೆ ನೀಡಿದೆ.

ರೈಲುಗಳಲ್ಲಿ ನೀಡಲಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದು ಎಂದು ಇತ್ತೀಚೆಗೆ ಸಿಎಜಿ ವರದಿ ಸಲ್ಲಿಸಿತ್ತು.  ಇದಕ್ಕೆ ಇಂಬು ನೀಡುವಂತೆ ಕಳೆದ ಮಂಗಳವಾರ ಪೂರ್ವ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲಿನಲ್ಲಿ ರೈಲಿನ  ಪ್ರಯಾಣಿಕರೊಬ್ಬರಿಗೆ ನೀಡಿದ ಊಟದಲ್ಲಿ ಹಲ್ಲಿ ಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಸುದ್ದಿ ಬೆನ್ನಲ್ಲೇ ರೈಲ್ವೇ ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಹೌರಾ–ದೆಹಲಿ  ಎಕ್ಸ್‌ಪ್ರೆಸ್ ರೈಲಿನಲ್ಲಿ ಇತ್ತೀಚೆಗೆ ಪ್ರಯಾಣಿಕರೊಬ್ಬರಿಗೆ ಪೂರೈಸಲಾದ ವೆಜ್‌ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು. ಕೇಟರಿಂಗ್ ಕಂಪೆನಿ ಪೂರೈಸಿದ್ದ ಆಹಾರವನ್ನು ಪ್ರಯಾಣಿಕರೊಬ್ಬರು ಸೇವಿಸಿದ್ದರು. ಹಲ್ಲಿ  ಇರುವುದು ಅವರಿಗೆ ತಿಳಿದಿರಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಅನಾರೋಗ್ಯ ಉಂಟಾಯಿತು ಎಂದು ಸಹ ಪ್ರಯಾಣಿಕರಾದ ಮೇಘನಾ ಸಿನ್ಹಾ ಎಂಬುವರು ಟ್ವೀಟ್ ಮಾಡಿದ್ದರು.

ನಂತರ ಈ ಬಗ್ಗೆ ಕ್ರಮ ಕೈಗೊಂಡಿದ್ದ ರೈಲ್ವೆ ಇಲಾಖೆ, ಕಳೆಪೆ ಆಹಾರ ಪೂರೈಸಿದ ಆರ್.ಕೆ. ಅಸೋಸಿಯೇಟ್ಸ್ ಕೇಟರಿಂಗ್ ಸಂಸ್ಥೆಜತೆಗಿನ ಒಪ್ಪಂದವನ್ನು ರದ್ದುಗೊಳಿಸಿತ್ತು. ಇಂಥ ಕೆಲವು ಪ್ರಕರಣಗಳು ಇತ್ತೀಚೆಗೆ ನಡೆದಿರುವುದು  ರೈಲ್ವೆ ಇಲಾಖೆಯನ್ನು ತೀವ್ರ ಮುಜುಗರಕ್ಕೀಡುಮಾಡಿದೆ.

ಈ ಪ್ರಕರಣ ನಡೆದ 4 ದಿನಗಳು ಕಳದೆ ಬಳಿಕ ಇದೇ ಮೊದಲ ಬಾರಿಗೆ ಈ ಬಗ್ಗೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, "ರೈಲುಗಳಲ್ಲಿರುವ ಅಡುಗೆ ಕೋಚ್‌ಗಳನ್ನು ನವೀಕರಿಸುವ ಪ್ರಕ್ರಿಯೆಗೆ ಒಂದು ವರ್ಷ ಅಥವಾ ಅದಕ್ಕಿಂತ  ಹೆಚ್ಚಿನ ಸಮಯ ಬೇಕಾಗಲಿದೆ. ಹೀಗಾಗಿ ಅಲ್ಲಿಯವರೆಗೂ ಪ್ರಯಾಣಿಕರು ಮನೆಯಿಂದಲೇ ಆಹಾರ ತೆಗೆದುಕೊಂಡು ಬರುವುದು ಉತ್ತಮ" ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ. ಮಿತ್ತಲ್ ಹೇಳಿದ್ದಾರೆ.

ರೈಲು ಪ್ರಯಾಣಿಕರು ಊಟದ ಸಮಸ್ಯೆ ಬಗ್ಗೆ ಇಲಾಖೆಗೆ ಮಾಹಿತಿ ಇದೆ. ಆದರೆ ಇವುಗಳನ್ನುತುರ್ತಾಗಿ ಬಗೆಹರಿಸಲು ಸಾಧ್ಯವಿಲ್ಲ. ಆದರೆ ಕಾಲಾನುಕ್ರಮದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ, ಪ್ರತೀ ನಿತ್ಯ ಸುಮಾರು 15  ಲಕ್ಷ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡುವುದು ಸುಲಭದ ಮಾತಲ್ಲ. ಆಹಾರ ಪ್ರಮಾಣ ಹಾಗೂ ಗುಣಮಟ್ಟ ಕೆಲವೊಮ್ಮೆ ಏರುಪೇರಾಗುತ್ತದೆ. ಆದರೆ ಈ ಸಮಸ್ಯೆ ಶಾಶ್ವತವಾಗಿರುವುದಿಲ್ಲ. ಈ ಬಗ್ಗೆ ಇಲಾಖೆ ಕಠಿಣ ಕ್ರಮಗಳನ್ನು  ಕೈಗೊಳ್ಲುತ್ತಿದ್ದು, ಹೊಸ ಬಗೆಯ ಮತ್ತು ಶುಚಿತ್ವ ವಿರುವ ಅತ್ಯಾಧುನಿಕ ಅಡುಗೆ ಮನೆಗಳನ್ನು ಕೋಚ್ ಗಳಲ್ಲಿ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.

ಇನ್ನೊಂದು ವರ್ಷದಲ್ಲಿ ಇದು ಪೂರ್ಣವಾಗುವ ವಿಶ್ವಾಸವಿದೆ. ಅಂತೆಯೇ ಇ-ಕ್ಯಾಟರಿಂಗ್ ವ್ಯವಸ್ಥೆಗೂ ಆದ್ಯತೆ ನೀಡಲಾಗುತ್ತಿದ್ದು, ಪ್ರಯಾಣಿಕರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತದೆ ಎಂದು ಎಕೆ ಮಿತ್ತಲ್ ಹೇಳಿದ್ದಾರೆ.

SCROLL FOR NEXT