ಹತ್ಯೆಯಾದ ಎಲ್ಇಟಿ ಕಮಾಂಡರ್ ಅಬು ದುಜಾನಾ ಹಾಗೂ ಎನ್ ಕೌಂಟರ್ ನಡೆಯುತ್ತಿರುವ ಸ್ಥಳ
ಪುಲ್ವಾಮ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಎನ್ ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಅಬು ದುಜಾನಾ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಮಂಗಳವಾರ ತಿಳಿದುಬಂದಿದೆ.
ಪುಲ್ವಾಮಾ ಜಿಲ್ಲೆಯ ಹರ್ಕಿಮಾ ಎಂಬ ಗ್ರಾಮದಲ್ಲಿ 2-3 ಉಗ್ರರು ಅಡಗಿ ಕುಳಿತಿರುವುದಾಗ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು ಬೆಳಿಕ್ಕೆ4.30ರ ಸುಮಾರಿಗೆ 182 ಬೆಟಾಲಿಯನ್, 183 ಬೆಟಾಲಿಯನ್, ಸಿಆರ್'ಪಿಎಫ್, 55 ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದಿತ್ತು.
ಸೇನಾ ಪಡೆ ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಉಗ್ರರು ಹಾಗೂ ಯೋಧರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಅಡಗಿ ಕುಳಿತು ದಾಳಿ ನಡೆಸುತ್ತಿದ್ದ ಉಗ್ರರಿಗೆ ಸೇನೆ ದಿಟ್ಟ ಉತ್ತರವನ್ನು ನೀಡಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಹತ್ಯೆಯಾಗಿರುವ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರರನನ್ನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಕಮಾಂಡರ್ ಅಬು ದುಜಾನಾ ಎಂದು ಹೇಳಲಾಗುತ್ತಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ; ಕಾಶ್ಮೀರದ ಹಲವೆಡೆ ಕಲ್ಲು ತೂರಾಟ
ಪುಲ್ವಾಮ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರ ವಿರುದ್ದ ನಡೆಸಲಾಗುತ್ತಿದ್ದ ಕಾರ್ಯಾಚರಣೆಯನ್ನು ಸೇನಾ ಪಡೆ ಅಂತ್ಯಗೊಳಿಸಿರುವ ಬೆನ್ನಲ್ಲೇ ಇದೀಗ ಕಾಶ್ಮೀರದ ಹಲವೆಡೆ ಕಲ್ಲು ತೂರಾಟ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.
ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೆಲ ಸ್ಥಳೀಯರು ಸೇನಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕಲ್ಲುತೂರಾಟಗಾರರನ್ನು ಚದುರಿಸುವ ಸಲುವಾಗಿ ಭದ್ರತಾ ಪಡೆಗಳು ಗಾಳಿಯಲ್ಲು ಗುಂಡು ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಎನ್ ಕೌಂಟರ್ ಕುರಿತಂತೆ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಎಸ್.ಪಿ.ವೈದ್ ಅವರು, ಎನ್ ಕೌಂಟರ್ ನಡೆದ ಸ್ಧಳದಲ್ಲಿ ಉಗ್ರರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತದೇಹಗಳು ದೊರಕಿದ ಬಳಿಕವಷ್ಟೇ ಉಗ್ರರ ಗುರ್ತಿಕೆ ಕುರಿತಂತೆ ಮಾಹಿತಿ ನೀಡಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos