"ಭಾರತ ಆಕ್ರಮಿತ ಕಾಶ್ಮೀರ": ಯಡವಟ್ಟು ಮಾಡಿ ಕ್ಷಮೆಯಾಚಿಸಿದ ಕಾಂಗ್ರೆಸ್
ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಟೀಕಿಸುವ ಉದ್ದೇಶದಿಂದ ಉತ್ತರಪ್ರದೇಶ ರಾಜ್ಯ ಕಾಂಗ್ರೆಸ್ ಘಟಕ ಹೊರತಂದ ಕಿರುಪುಸ್ತಕದಲ್ಲಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ನಮೂದಿಸಲಾಗಿದೆ.
ಕಾಂಗ್ರೆಸ್ ನಿಂದ ಆಗಿರುವ ಆಚಾತುರ್ಯಕ್ಕೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗತೊಡಗಿದ್ದು, ಪಕ್ಷ ಬಹಿರಂಗವಾಗಿ ಕ್ಷಮೆಯಾಚಿಸಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಬರೆಯಲಾದ ಪುಸ್ತಕವನ್ನು ಮುಖಂಡ ಗುಲಾಂ ನಬಿ ಆಜಾದ್ ಲಖನೌದಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಭಾರತದ ನಕಾಶೆಯಲ್ಲಿ ಭಾರತದ ಬಳಿಯಿರುವ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂಬು ನಮೂದಿಸಿರುವುದು ಈ ವೇಳೆ ಬೆಳಕಿಗೆ ಬಂದಿತ್ತು.
ಅಚಾತುರ್ಯ ಕುರಿತಂತೆ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಿದ್ದು, ಮುದ್ರಣ ದೋಷದಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತಂತೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಕಾಂಗ್ರೆಸ್ ಪಾಕಿಸ್ತಾನದ ಭಾಷೆಯನ್ನು ಮಾತನಾಡುತ್ತಿದೆಯೇ? ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಬಣ್ಣಿಸಿರುವುದು ಆಘಾತಕಾರಿ ಎಂದು ತಿಳಿಸಿದ್ದಾರೆ.
ಘಟೆ ಸಂಬಂಧ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರು, ಮುದ್ರಣ ಮಾಡಿದವರು ಈಗಾಗಲೇ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಮತ್ತೆ ಮತ್ತೆ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸಮಸ್ಯೆಯನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್ ಹೀಗಾಗಿ ಅವರು ಪಾಕಿಸ್ತಾನದ ಪರವಾಗಿದ್ದಾರೆಯೋ ಅಥವಾ ಭಾರತದ ಪರವಾಗಿದ್ದಾರೆಯೋ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕಿದೆ. ಕಾಂಗ್ರೆಸ್ ಪಕ್ಷದಿಂದಲೇ ಹೊರ ಬಂದ ಪುಸ್ತಕದಲ್ಲಿ ಮುದ್ರಣಗೊಂಡಿರುವ ಅಂಶಗಳು ಈ ರೀತಿಯ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಇದು ನಿಜಕ್ಕೂ ಖಂಡನೀಯ. ಎಂದು ಉತ್ತರಪ್ರದೇಶ ಬಿಜೆಪಿ ವಕ್ತಾರ ಶಲಾಭ್ ಮಣಿ ತ್ರಿಪಾಠಿಯವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos