ಬರ್ಹಾಂಪುರ್: ಸೇನಾ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ 6 ಯೋಧರಿಗೆ ಗಾಯವಾಗಿರುವ ಘಟನೆ ಒಡಿಶಾದ ಕಂದಾಮಾಲ್ ಜಿಲ್ಲೆಯಲ್ಲಿ ನಡೆದಿದೆ.
ವಿಶೇಷ ಕಾರ್ಯಾಚರಣಾ ಪಡೆ (ಎಸ್ಒಜಿ) ಪಡೆ ಭಾನುವಾರ ಕಾರ್ಯಾಚರಣೆ ಮುಗಿಸಿ ವಾಹನದಲ್ಲಿ ಹಿಂತಿರುಗುತ್ತಿತ್ತು. ಈ ವೇಳೆ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಬರ್ಹಾಂಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುತಾತ್ಮನಾದ ಯೋಧರನ್ನು ಲಕ್ಷ್ಮೀಕಾಂತ್ ಜಾನಿ ಎಂದು ಹೇಳಲಾಗುತ್ತಿದೆ.
ನಕ್ಸಲರಿಗಾಗಿ ಸೇನಾಪಡೆ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
300ಕ್ಕೂ ಹೆಚ್ಚು ಸುತ್ತುಗಳ ಗುಂಡುಗಳನ್ನು ನಕ್ಸಲರು ಹಾರಿಸಿದ್ದಾರೆ. ಅಲ್ಲದೆ, ಸೇನಾ ಪಡೆ ಮೇಲೆ ಗ್ರೆನೇಡ್ ದಾಳಿಯನ್ನೂ ನಡೆಸಿದ್ದಾರೆ. ಕೊನೆಯಲ್ಲಿದ್ದ ವಾಹನದ ಮೇಲೆ ಸುಧೀರ್ಘವಾಗಿ ಗುಂಡಿನ ಮಳೆ ಸುರಿಸಿದ್ದರು. ಈ ವೇಳೆ ಜಾನಿ ಹುತಾತ್ಮನಾಗಿದ್ದಾರೆ. ಅಲ್ಲದೆ, 6 ಯೋಧರು ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ.