ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಕ್ಷೆಯ ಅವಧಿ ಮುಗಿಸಿದ 11 ಪಾಕಿಸ್ತಾನದ ಕೈದಿಗಳನ್ನು ಭಾರತ ಬಿಡುಗಡೆ ಮಾಡಿದ್ದು, ವಾಘಾ ಗಡಿ ಮೂಲಕ ಎಲ್ಲಾ ಕೈದಿಗಳು ತಮ್ಮ ತಾಯ್ನಾಡಿಗೆ ತೆರಳಿದ್ದಾರೆ.
ಪಾಕಿಸ್ತಾನ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ವಿಚಾರ ಹಾಗೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿರುವ ಮಧ್ಯೆಯೇ ಭಾರತ ಪಾಕಿಸ್ತಾನದ 11 ಕೈದಿಗಳನ್ನು ಬಿಡುಗಡೆ ಮಾಡಿದೆ.
ಕಜಕಿಸ್ತಾನದ ರಾಜಧಾನಿಯಾದ ಆಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಒಕ್ಕೂಟ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಪರಸ್ಪರ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ ಬಳಿಕ ಈ ಬೆಳವಣಿಗೆಗಳು ಕಂಡು ಬಂದಿದ್ದು, ಉಭಯ ದೇಶಗಳ ಜನರಲ್ಲಿ ಸಾಕಷ್ಟು ಕುತೂಹಲಗಳು ಮೂಡಿಸಿದೆ. ಪಾಕಿಸ್ತಾನದಲ್ಲಿರುವ ಭಾರತೀಯ ಕೈದಿಗಳಿಗು ಬಿಡುಗಡೆ ಭಾಗ್ಯ ಸಿಗುವ ನಿರೀಕ್ಷೆಗಳು ಇದೀಗ ವ್ಯಕ್ತವಾಗತೊಡಗಿವೆ.