ನವದೆಹಲಿ: ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರು ಸೇನಾ ಮುಖ್ಯಸ್ಥರನ್ನು 'ಬೀದಿ ಗೂಂಡಾ' ಎನ್ನುವ ಮೂಲಕ ಅವಮಾನ ಮಾಡಿದ್ದು, ಹೇಳಿಕೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೂಡಲೇ ಕ್ಷಮೆಯಾಚಿಸಬೇಕೆಂದು ಬಿಜೆಪಿ ಸೋಮವಾರ ಹೇಳಿದೆ.
ಸೇನಾ ಮುಖ್ಯಸ್ಥರ ಕುರಿತಂತೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಅವರು, ಕಾಂಗ್ರೆಸ್ ನ ಈ ರೀತಿಯ ವರ್ತನೆ ಕಂಡು ಸಾಕಷ್ಟು ಆಘಾತವಾಯಿತು. ದೇಶಕ್ಕಾಗಿರುವ ಸೇನೆಯ ಪಾತ್ರವನ್ನು ಹಾಳು ಮಾಡುತ್ತಿದ್ದಾರೆ. ಸೇನೆಯ ಘನತೆಯನ್ನು ಅವರು ಪ್ರಶ್ನಿಸಿದ್ದಾರೆ. ಹೀಗಾಗಿ ಕೂಡಲೇ ಕಾಂಗ್ರೆಸ್ ಕ್ಷಮಾಪಣಾ ಪತ್ರವನ್ನು ಸಲ್ಲಿಕೆ ಮಾಡಬೇಕೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ಪತ್ರಕರ್ತರೊಂದಿಗೆ ಮಾತನಾಡಿದ್ದ ಸಂದೀಪ್ ದೀಕ್ಷಿತ್ ಅವರು, ಪಾಕಿಸ್ತಾನ ಸೇನಾ ಮುಖ್ಯಸ್ಥರು ಕೆಟ್ಟ ಭಾಷೆ ಬಳಕೆ ಮಾಡಿದರೆ, ಭಾರತೀಯ ಸೇನಾ ಮುಖ್ಯಸ್ಥರೇಕೆ ಅವರ ಹೇಳಿಕೆಗಳಿಗೆ ಬೀದಿ ಗೂಂಡಾದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದರು. ಸಂದೀಪ್ ದೀಕ್ಷಿತ್ ಅವರ ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ.