ದೇಶ

ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ: ರಾಜನಾಥ್ ಸಿಂಗ್ ಭೇಟಿ ವೇಳೆ ಮಿಜೋರಾಂನಲ್ಲಿ ಬೀಫ್ ಪಾರ್ಟಿ

Manjula VN
ಐಜಾಲ್: ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ಮಿಜೋರಾಂನಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡುವ ವೇಳೆ ಬೀಫ್ ಪಾರ್ಟಿ ನಡೆಸಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. 
ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಭದ್ರತೆ ಕುರಿತಂತೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲು ಮಿಜೋರಾಂನಲ್ಲಿರುವ ರಾಜಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ 2 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, ಬೀಫ್ ಪಾರ್ಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಜೊಲೈಫ್ ಎಂಬ ಸ್ಥಳೀಯ ಸಂಘಟನೆಯೊಂದು ಬೀಫ್ ಪಾರ್ಟಿಯನ್ನು ಮಾಡಿದೆ. ಪ್ರತಿಭಟನೆ ಕುರಿತಂತೆ ಹೇಳಿಕೆ ನೀಡಿರುವ ಸಂಘಟನೆಯು, ಕೇವಲ ಗೋಮಾಂಸ ಸೇವನೆಗಾಗಿ ಮಾತ್ರ ನಾವು ಈ ಕಾರ್ಯಕ್ರಮವನ್ನು ನಡೆಸಿಲ್ಲ. ಭಾರತ ಸಂವಿಧಾನ ನಮಗೆ ಕೊಟ್ಟಿರುವ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆಂದು ತಿಳಿಸಿದೆ. 
ಮೊದಲೆಲ್ಲಾ ಗೋಮಾಂಸ ಸೇವನೆಗೆ ಯಾವುದೇ ರೀತಿಯ ವಿರೋಧಗಳಿರಲಿಲ್ಲ. ಆದರೆ, ಇದೀಗ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ನಡೆಸಲಾಗುತ್ತಿರುವ ಪಿತೂರಿಗಳನ್ನು ನಾವು ನೋಡುತ್ತಿದ್ದೇವೆ. ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬುದನ್ನು ನಿರ್ಧರಿಸುವುದು ಒಬ್ಬ ವ್ಯಕ್ತಿಯ ಹಕ್ಕಾಗಿರುತ್ತದೆ. ಇದರ ಮೇಲೆ ಯಾರಿಗೂ ನಿರ್ಬಂಧ ಹೇರುವ ಹಕ್ಕಿಲ್ಲ ಎಂದು ಜೊಲೈಫ್ ಸಂಘಟನೆಯ ಸದಸ್ಯರು ಹೇಳಿದ್ದಾರೆ.
SCROLL FOR NEXT