ವಿಧಾನಸಭೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಡಿಎಂಕೆ ಶಾಸಕರು
ಚೆನ್ನೈ: ಎಐಎಡಿಎಂಕೆ ಶಾಸಕರ ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಡಿಎಂಕೆಯ ಎಲ್ಲಾ ಶಾಸಕರನ್ನು ಸಾಮೂಹಿಕವಾಗಿ ಸ್ಪೀಕರ್ ಸದನದಿಂದ ಹೊರ ಹಾಕಿದ್ದಾರೆ.
ಕಳೆದ ಫೆಬ್ರವರಿ 18ರಂದು ನಡೆದ ವಿಶ್ವಾಸಮತಕ್ಕಾಗಿ ಆಡಳಿತ ಪಕ್ಷದ ಶಾಸಕರ ಮತಕ್ಕಾಗಿ ಲಂಚ ಪಡೆದ ಕುಟುಕು ಕುಟುಕು ಕಾರ್ಯಾಚರಣೆ ಕುರಿತಂತೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಪ್ರತಿಪಕ್ಷದ ನಾಯಕ ಸ್ಟಾಲಿನ್ ಅವರು ಒತ್ತಾಯಿಸಿದರು. ಆದರೆ ಡಿಎಂಕೆ ಕೋರಿಕೆಯನ್ನು ತಿರಸ್ಕರಿಸಿದ ಸ್ಪೀಕರ್ ಪಿ ಧನಪಾಲ್ ಅವರು ಇದು ನ್ಯಾಯಾಂಗ ಸಂಬಂಧಿಸಿರುವುದರಿಂದ ಸದನದಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದರು. ಈ ವೇಳೆ ಸ್ಟಾಲಿನ್ ಮತ್ತು ಸ್ವೀಕರ್ ನಡುವೆ ತೀವ್ರ ವಾಗ್ವಾದ ನಡೆಯಿತು ಎನ್ನಲಾಗಿದೆ.
ಎಐಎಡಿಎಂಕೆ ಸಚಿವರು, ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಡಿಎಂಕೆ ಸದಸ್ಯರು, ಸದನದಲ್ಲಿ ಮೊದಲು ಸ್ಟ್ರಿಂಗ್ ಆಪರೇಶನ್ ಕುರಿತ ಚರ್ಚೆಯಾಗಲಿ ಎಂದು ಒತ್ತಾಯಿಸಿದರು.
ಸದನದಲ್ಲಿ ಕೋಲಾಹಲ ಉಂಟಾದಾಗ ಸಭಾಪತಿ ಡಿಎಂಕೆ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದರು. ಸಭಾಪತಿ ತೀರ್ಮಾನದಿಂದ ಅಸಮಾಧಾನಗೊಂಡ ಡಿಎಂಕೆ ಸದಸ್ಯರು ಸ್ಟಾಲಿನ್ ನೇತೃತ್ವದಲ್ಲಿ ಸದನದ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ಸದಸ್ಯರನ್ನು ಸ್ಪೀಕರ್ ಮಾರ್ಷೆಲ್ ಗಳ ಮೂಲಕ ಸದನದಿಂದ ಹೊರ ಹಾಕಿದ್ದು, ಈಗ ವಿಧಾನಸಭೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಸ್ಟ್ರಿಂಗ್ ಆಪರೇಶನ್ ಘಟನೆಯನ್ನು ಸಿಬಿಐಗೆ ಒಪ್ಪಿಸುವವರಿಗೆ ಹೋರಾಟ ನಿಲ್ಲದು ಎಂದು ಡಿಎಂಕೆ ಮುಖಂಡರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos