ನವದೆಹಲಿ: ರಾಜಧಾನಿ ದೆಹಲಿ ಸೊಳ್ಳೆಗಳ ಕಾಟಕ್ಕೆ ತತ್ತರಿಸಿ ಹೋಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ 146 ಚಿಕುನ್ ಗುನ್ಯಾ, 87 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಸ್ವಚ್ಛತೆ ಕುರಿತಂತೆ ಕಳೆದ ತಿಂಗಳಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದರೂ. ದಿನದಿಂದ ದಿನಕ್ಕೆ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿವೆ. ರೋಗ ನಿಯಂತ್ರಣಕ್ಕಾಗಿ ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜಾಹೀರಾತುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಈ ಎಲ್ಲದರ ನಡುವೆಯೂ ಜೂನ್.17ರವರೆಗೂ ದೆಹಲಿಯಲ್ಲಿ ಈ ವರೆಗೂ 146 ಚಿಕುನ್ ಗುನ್ಯಾ ಹಾಗೂ 87 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 146 ಚಿಕುನ್ ಗುನ್ಯಾ ಪ್ರಕರಣಗಳಲ್ಲಿ ಕಳೆದ ತಿಂಗಳು 10 ಮಂದಿಯಲ್ಲಿ ರೋಗವಿರುವುದು ಕಂಡು ಬಂದಿತ್ತು.
ಏಪ್ರಿಲ್ ತಿಂಗಳಿನಲ್ಲಿ 17, ಮಾರ್ಚ್ ತಿಂಗಳಿನಲ್ಲಿ 34 ಪ್ರಕರಣಗಳು, ಜನವರಿಯಲ್ಲಿ 20 ಹಾಗೂ ಫೆಬ್ರವರಿ ತಿಂಗಳಿಲ್ಲಿ 13 ಪ್ರಕರಣಗಳು ಕಂಡು ಬಂದಿತ್ತು.
ಪ್ರಸಕ್ತ ತಿಂಗಳಿನಲ್ಲಿ 10 ಮಂದಿಯಲ್ಲಿ ಡೆಂಗ್ಯೂ ರೋಗವಿರುವುದು ಕಂಡು ಬಂದಿದೆ. ಮೇ ತಿಂಗಳಿನಲ್ಲಿ 17, ಜನವರಿ 6 ಪ್ರಕರಣಗಳು, ಫೆಬ್ರವರಿ 4, ಮಾರ್ಚ್ 11, ಏಪ್ರಿಲ್ ತಿಂಗಳಿಲ್ಲಿ ಬಹುತೇಕ ಮಂದಿಯಲ್ಲಿ ರೋಗವಿರುವುದು ಕಂಡು ಬಂದಿತ್ತು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಜ್ರಿವಾಲ್ ಅವರು ಈಗಾಗಲೇ ಪಾಲಿಕೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಸಭೆಯಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೂ ಕೇಜ್ರಿವಾಲ್ ಅವರು ಪತ್ರ ಬರೆದಿದ್ದು, ಡೆಂಗ್ಯೂ ಹಾಗೂ ಚಿಕುನ್ ಗುನ್ಯಾದಿಂದಾಗಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos