ಶಿಮ್ಲಾ: ಮೂರು ವಾರಗಳ ಹಿಂದಷ್ಟೇ ಬಿಹಾರ ರಾಜ್ಯಪಾಲ ಹಾಗೂ ಆಡಳಿತರೂಢ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಮತ್ತು ಅವರ ಕುಟುಂಬಕ್ಕೆ ಶಿಮ್ಲಾದ ಮಶೋಬ್ರಾದಲ್ಲಿರುವ ರಾಷ್ಟ್ರಪತಿಗಳ ಬೇಸಿಗೆ ವಿಶ್ರಾಂತಿ ಧಾಮಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.
ಹಲವು ಪ್ರಮುಖರು, ಗಣ್ಯರು ಶಿಮ್ಲಾಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರಪತಿಗಳ ವಿಶ್ರಾಂತಿ ಧಾಮಕ್ಕೆ ಭೇಟಿ ನೀಡುತ್ತಾರೆ ಮತ್ತು ಕೆಲ ಕಾಲ ಅಲ್ಲಿ ಉಳಿಯುತ್ತಾರೆ. ಆದರೆ ಮೂರು ವಾರಗಳ ಹಿಂದೆ ಅಲ್ಲಿಗೆ ತೆರಳಿದ್ದ ರಾಮನಾಥ್ ಕೋವಿಂದ್ ಅವರು ಸರಿಯಾದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೂಲಕ ಅದರ ಒಡೆಯರಾಗುತ್ತಿದ್ದಾರೆ.
ಮೇ ಅಂತ್ಯದಲ್ಲಿ ಬೇಸಿಗೆ ರಜೆಗಾಗಿ ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾ ಭೇಟಿ ನೀಡಿದ್ದ ಬಿಹಾರ ರಾಜ್ಯಪಾಲರು, ಶಿಮ್ಲಾದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ರಾಷ್ಟ್ರಪತಿಗಳ ವಿಶ್ರಾಂತಿ ಧಾಮಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದರು. ಆದರೆ ಭದ್ರತೆಯ ದೃಷ್ಟಿಯಿಂದ ರಾಮನಾಥ್ ಕೋವಿಂದ್ ಅವರಿಗೆ ಅನುಮತಿ ನಿರಾಕರಿಸಲಾಗಿತ್ತು.